ಅರಣ್ಯ ಸಿಬ್ಬಂದಿಗೆ ಪದಕ ಕೊಡಲು ಸಿಎಂಗೆ ಬಿಡುವಿಲ್ಲ
ಅರಣ್ಯ ಸಂರಕ್ಷಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ 25 ಸಿಬ್ಬಂದಿಗೆ ಇದೇ ಮೊದಲ ಬಾರಿಗೆ ‘ಮುಖ್ಯಮಂತ್ರಿಯವರ ಪದಕ’ ನೀಡಲು ಅರಣ್ಯ ಇಲಾಖೆ ಸಕಲ ಸಿದ್ಧತೆ ಪೂರ್ಣಗೊಳಿಸಿ ಒಂದು ತಿಂಗಳಾಗಿದೆ. ಆದರೆ, ಪ್ರಶಸ್ತಿ ಪ್ರದಾನ ಮಾಡಬೇಕಾದ ಮುಖ್ಯಮಂತ್ರಿಯವರ ಸಮಯ ನಿಗದಿಯಾಗದೇ ವಿಜೇತರಿಗೆ ಪ್ರಶಸ್ತಿ ಇನ್ನೂ ಮರೀಚಿಕೆಯಾಗಿದೆ!
ಬೆಂಗಳೂರು : ಅರಣ್ಯ ಸಂರಕ್ಷಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ 25 ಸಿಬ್ಬಂದಿಗೆ ಇದೇ ಮೊದಲ ಬಾರಿಗೆ ‘ಮುಖ್ಯಮಂತ್ರಿಯವರ ಪದಕ’ ನೀಡಲು ಅರಣ್ಯ ಇಲಾಖೆ ಸಕಲ ಸಿದ್ಧತೆ ಪೂರ್ಣಗೊಳಿಸಿ ಒಂದು ತಿಂಗಳಾಗಿದೆ. ಆದರೆ, ಪ್ರಶಸ್ತಿ ಪ್ರದಾನ ಮಾಡಬೇಕಾದ ಮುಖ್ಯಮಂತ್ರಿಯವರ ಸಮಯ ನಿಗದಿಯಾಗದೇ ವಿಜೇತರಿಗೆ ಪ್ರಶಸ್ತಿ ಇನ್ನೂ ಮರೀಚಿಕೆಯಾಗಿದೆ!
ಪೊಲೀಸ್ ಇಲಾಖೆ ಮಾದರಿಯಲ್ಲಿ ಅರಣ್ಯ ಇಲಾಖೆಯಲ್ಲೂ ವಿಶೇಷ ಸೇವೆ ಸಲ್ಲಿಸಿದವರಿಗೆ ಮುಖ್ಯಮಂತ್ರಿಯವರ ಹೆಸರಿನಲ್ಲಿ ಪದಕ ನೀಡಲು ಇಲಾಖೆ ಮುಂದಾಗಿದ್ದು, ಇದಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಒಂದು ತಿಂಗಳ ಹಿಂದೆಯೇ ಪೂರೈಸಿದೆ. ಅನಂತರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಮಯಕ್ಕಾಗಿ ಕಾಯುತ್ತಲೇ ಇದೆ. ಉಪ ಚುನಾವಣೆ ನಂತರವಾದರೂ ಈ ಸಮಯ ಭಾಗ್ಯ ದೊರೆಯಬಹುದು ಎಂಬ ನಿರೀಕ್ಷೆಯನ್ನು ಇಲಾಖೆ ಹೊಂದಿದೆ.
ಅರಣ್ಯ ಸಂರಕ್ಷಣೆ, ಸಂಶೋಧನೆ ಹಾಗೂ ತರಬೇತಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ 25 ಮಂದಿಯನ್ನು ಮುಖ್ಯಮಂತ್ರಿಯವರ ಪದಕಕ್ಕಾಗಿ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಾಗಿ ವೃತ್ತ, ವಲಯ ಹಾಗೂ ರಾಜ್ಯಮಟ್ಟದಲ್ಲಿ ಆಯ್ಕೆ ಸಮಿತಿಗಳ ಮೂಲಕ ನೂರಾರು ಮಂದಿ ಅರ್ಹರನ್ನು ಪರಿಗಣಿಸಿ ಪರಿಶೋಧಿಸಿದ ನಂತರ 25 ಮಂದಿಯ ಪಟ್ಟಿಸಿದ್ಧಪಡಿಸಲಾಗಿದೆ.
ಪ್ರಸ್ತುತ 2017ನೇ ಸಾಲಿನ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಮುಂದಿನ ವರ್ಷದ ಪಟ್ಟಿಸಿದ್ಧತೆ ಮಾಡುವುದಕ್ಕಾಗಿ ಶೀಘ್ರದಲ್ಲಿ ನೋಟಿಫಿಕೇಷನ್ ಹೊರಡಿಸಲು ತಯಾರಿ ನಡೆಯುತ್ತಿದೆ. ಆದರೆ, ಮೊದಲ ಸಾಲಿನ ಪ್ರಶಸ್ತಿ ವಿತರಣೆ ಮಾಡಿದರೆ, ಮುಂದಿನ ಸಾಲಿಗೆ ಸಿದ್ಧತೆ ನಡೆಸಬಹುದಾಗಿದೆ. 2017ನೇ ಸಾಲಿನ ಪದಕ ಮತ್ತು ಪ್ರಶಸ್ತಿ ಪ್ರದಾನಕ್ಕೆ ಕಾಲ ಕೂಡಿ ಬರದ ಹಿನ್ನೆಲೆಯಲ್ಲಿ 2018ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆಯೂ ವಿಳಂಬವಾಗುತ್ತಿದೆ.
ಮೂರು ವರ್ಷ ಸೇವೆ ಪರಿಗಣನೆ:
ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಮೂರು ವರ್ಷಗಳ ಸೇವಾ ಅನುಭವವನ್ನು ರಾಜ್ಯದ ಎಲ್ಲ ಜಿಲ್ಲೆಗಳ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಅಲ್ಲದೆ, ಈ ಪಟ್ಟಿಯಲ್ಲಿ ಇಲಾಖಾ ಮಟ್ಟದಲ್ಲಿ ಹಿರಿಯ ಅಧಿಕಾರಿಗಳ ಸಭೆ ಕರೆದು ಅಂತಿಮವಾಗಿ 25 ಜನರ ಪಟ್ಟಿಸಿದ್ಧಪಡಿಸಿದ್ದು ಸರ್ಕಾರಕ್ಕೆ ರವಾನಿಸಲಾಗಿದೆ. ಶೀಘ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳ ದಿನಾಂಕ ನಿಗದಿಯಾದ ತಕ್ಷಣ ಕಾರ್ಯಕ್ರಮ ಮಾಡಿ ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದು ಹೆಸರೇಳಲಿಚ್ಛಿಸದ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.