ಬೆಚ್ಚಿ ಬಿದ್ದ ಜಮ್ಮು ಕಾಶ್ಮೀರ ಜನತೆ : ಮತ್ತೊಂದು ವಿಕೋಪ
ಜಮ್ಮು ಕಾಶ್ಮೀರದಲ್ಲಿ ಜನತೆ ಮತ್ತೊಂದು ವಿಕೋಪದಿಂದ ತತ್ತರಿಸಿದ್ದಾರೆ. ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್ ಸಂಪರ್ಕ, ಸಾರಿಗೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ವರ್ಷದ ಮೊದಲ ಹಿಮಪಾತವಾಗಿದೆ. ವಿಶೇಷವೆಂದರೆ ಹಲವು ದಶಕಗಳಲ್ಲಿ ಇದೇ ಮೊದಲ ಬಾರಿಗೆ ನವೆಂಬರ್ ತಿಂಗಳಿನಲ್ಲಿಯೇ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಹಿಮಪಾತವಾಗಿದ್ದು, ಹಲವೆಡೆ ಸಾಮಾನ್ಯ ಜನಜೀವ ನದ ಮೇಲೆ ಪರಿಣಾಮ ಬೀರಿದೆ.
ರಾಜ್ಯದ ಹಲವು ನಗರಗಳು ಪೂರ್ಣ ಪ್ರಮಾಣದಲ್ಲಿ ಹಿಮಾವೃತವಾಗಿದ್ದು, ಪ್ರವಾಸಿಗರನ್ನು ಭಾರೀ ಪ್ರಮಾಣದಲ್ಲಿ ಆಕರ್ಷಿಸಿದೆ.
ಕಳೆದ 24 ಗಂಟೆಗಳಿಂದ ಆಗುತ್ತಿರುವ ಹಿಮಪಾತದಿಂದಾಗಿ ಹಲವು ಪ್ರಮುಖ ರಸ್ತೆ ಮಾರ್ಗಗಳು ಬಂದ್ ಆಗಿವೆ. ರಾಜ್ಯದ ಹಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯಾಗದೆ, ಕಳೆದೆರಡು ದಿನಗಳಿಂದ ಆಸ್ಪತ್ರೆಗಳು, ಮನೆಗಳು ಹಾಗೂ ಶಾಲೆಗಳು ಸಹ ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ.
ವಿದ್ಯಾರ್ಥಿಗಳು ಕ್ಯಾಂಡಲ್ ಬೆಳಕಿನಲ್ಲೇ ಪರೀಕ್ಷೆ ಬರೆಯುವಂತಾಗಿದೆ. ಈ ನಡುವೆ ಅಕಾಲಿಕ ಹಿಮಪಾತದಿಂದಾಗಿ ಕಟಾವಿಗೆ ಬಂದಿರುವ ಸೇಬುಹಣ್ಣಿನ ಬೆಳೆಗಾರರು ಚಿಂತೆಗೀಡಾಗಿದ್ದಾರೆ.