ಗೋ ಮಾರಾಟ ನಿಷೇಧ ವಾಪಸ್ ಇಲ್ಲ
ಮೀನುಮಾರುಕಟ್ಟೆ, ಅಕ್ವೇರಿಯಂ ಸಂಬಂಧಿತ ನೀತಿ ಮಾತ್ರ ವಾಪಸ್
ನವದೆಹಲಿ: ಜಾನುವಾರು ಮಾರುಕಟ್ಟೆಯಿಂದ ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವುದನ್ನು ನಿಷೇಧಿಸುವ ಮೇ 26ರ ಆದೇಶದಲ್ಲಿ ಯಾವುದ ಬದಲಾವಣೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಮೀನು ಮಾರುಕಟ್ಟೆ ಮತ್ತು ಅಕ್ವೇರಿಯಂ ನಿಯಂತ್ರಣಕ್ಕೆ ಸಂಬಂಧಿಸಿ ಈ ವರ್ಷದ ಮೇನಲ್ಲಿ ಜಾರಿಗೊಳಿಸಲಾಗಿದ್ದ ನೀತಿಯನ್ನು ಮಾತ್ರ ಶನಿವಾರ ಹಿಂಪಡೆಯಲಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ.
ಮೇ ಆದೇಶದಲ್ಲಿ, ನಿಯಮಗಳ ಅನುಸಾರ ದೇಶದಲ್ಲಿ ಅಕ್ವೇರಿಯಂಗೆ ಮೀನು ಮಾರಾಟ ಮಾಡುವ ಎಲ್ಲ ಅಂಗಡಿಗಳು ನೋಂದಣಿ ಮಾಡಿಕೊಳ್ಳಬೇಕು ಮತ್ತು ಮೀನುಗಳನ್ನು ಆರೋಗ್ಯಯುತವಾಗಿ ಕಾಪಾಡಲು ಕೆಲವೊಂದು ನಿಯಮಗಳನ್ನು ಪಾಲಿಸಲು ನಿರ್ದೇಶಿಸಲಾಗಿತ್ತು.
ಸುಮಾರು 158 ಅಲಂಕಾರಿಕ ಮೀನುಗಳ ತಳಿಗಳನ್ನು ಪ್ರದರ್ಶಿಸುವ ಮತ್ತು ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಮೀನುಗಳ ಆರೋಗ್ಯ ಕಾಪಾಡಲು ಪೂರ್ಣ ಪ್ರಮಾಣದ ಮೀನುಗಾರಿಕೆ ತಜ್ಞರನ್ನು ನಿಯೋಜಿಸುವುದು ಕಡ್ಡಾಯವಾಗಿತ್ತು. ಮೀನು ಸಾಕುವ ನೀರಿನ ಟ್ಯಾಂಕ್ನ ಗಾತ್ರ, ನೀರಿನ ಪ್ರಮಾಣ ಮತ್ತು ದಾಸ್ತಾನು ಪ್ರಮಾಣದ ಬಗ್ಗೆ ನಿಯಮಗಳನ್ನು ರೂಪಿಸಲಾಗಿತ್ತು.
ನೂತನ ನಿಯಮಗಳು ದೇಶೀಯ ಅಲಂಕಾರಿಕ ಮೀನು ಸಾಕಣಿಕೆ ಹಾಗೂ ರಫ್ತು ಉದ್ಯಮದ ಮೇಲೆ ಪ್ರಭಾವ ಬೀರುವಂತಿತ್ತು. ಹಲವಾರು ಮನವಿಗಳ ಹಿನ್ನೆಲೆಯಲ್ಲಿ, ಮೇ ಆದೇಶ ಹಿಂಪಡೆದಿದೆ.