ಮಾಂಸಾಹಾರ ಇಲ್ಲದಕ್ಕೆ ವರನ ತಗಾದೆ: ಬೇರೊಬ್ಬನ ವರಿಸಿದಳು ವಧು!
ಇಲ್ಲಿನ ಕುಹ್ಲೇದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆ ಔತಣದಲ್ಲಿ ಮಾಂಸಾಹಾರ ಖಾದ್ಯ ಇಲ್ಲದಿದ್ದುದನ್ನು ಕಂಡು ವರನ ಕಡೆಯವರು ಆಕ್ರೋಶಿತರಾಗಿದ್ದರು
ಮುಜಾರ್ನಗರ(ಏ.27): ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆ ನಿಷೇಧದ ಪರಿಣಾಮ ಹಳ್ಳಿಯೊಂದರಲ್ಲಿ ಮದುವೆ ಮುರಿದು ಬೀಳುವವರೆಗೂ ಬಂದು ನಿಂತಿದೆ. ಮದುವೆ ಸಮಾರಂಭವೊಂದರಲ್ಲಿ ಸಸ್ಯಾಹಾರಿ ಖಾದ್ಯಗಳನ್ನು ಮಾತ್ರ ಪೂರೈಸಿದ್ದುದಕ್ಕೆ ಕೋಪಗೊಂಡ ವರ ಮದುವೆಯನ್ನೇ ನಿರಾಕರಿಸಿದ ಕುತೂಹಲಕಾರಿ ಘಟನೆ ನಡೆದಿದೆ.
ಇಲ್ಲಿನ ಕುಹ್ಲೇದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆ ಔತಣದಲ್ಲಿ ಮಾಂಸಾಹಾರ ಖಾದ್ಯ ಇಲ್ಲದಿದ್ದುದನ್ನು ಕಂಡು ವರನ ಕಡೆಯವರು ಆಕ್ರೋಶಿತರಾಗಿದ್ದರು. ಮಾರುಕಟ್ಟೆಯಲ್ಲಿ ಮಾಂಸಾಹಾರ ಸಿಕ್ಕಿಲ್ಲವಾದುದರಿಂದ, ಸಸ್ಯಾಹಾರ ಖಾದ್ಯ ತಯಾರಿಸಲಾಗಿದೆ ಎಂದು ವಧುವಿನ ಕಡೆಯವರು ವರನ ಕುಟುಂಬವನ್ನು ಸಮಾಧಾನಿಸಲು ಸಾಕಷ್ಟು ಪ್ರಯತ್ನಗಳನ್ನೂ ನಡೆಸಿದರು. ಆದರೆ ವರನ ಕಡೆಯವರು ಅದನ್ನು ಒಪ್ಪಲಿಲ್ಲ.
ಹಠಾತ್ ಪಂಚಾಯತ್ ಕರೆದು ವಿಷಯ ಇತ್ಯರ್ಥಕ್ಕೆ ಪ್ರಯತ್ನಿಸಲಾಯಿತಾದರೂ, ಮದುವೆ ರದ್ದು ಪಡಿಸಲು ವಧುವೇ ನಿರ್ಧರಿಸಿದಳು. ತದನಂತರ ಮದುವೆಗೆ ಬಂದಿದ್ದ ಅತಿಥಿಯೊಬ್ಬ ವಧುವಿಗೆ ಮದುವೆಯ ಪ್ರಸ್ತಾಪವನ್ನು ಸ್ಥಳದಲ್ಲೇ ಇರಿಸಿದ, ಅದನ್ನು ವಧುವೂ ಒಪ್ಪಿ ಕೊನೆಗೂ ಘಟನೆ ಸುಖಾಂತ್ಯ ಕಂಡಿತು. ಅಕ್ರಮ ಕಸಾಯಿಖಾನೆಗಳ ಸ್ಥಗಿತದಿಂದಾಗಿ ಉತ್ತರ ಪ್ರದೇಶದಲ್ಲಿ ಕೆಜಿಗೆ 150ಕ್ಕೆ ಮಾರಾಟವಾಗುತ್ತಿದ್ದ ಎಮ್ಮೆ/ಕೋಣದ ಮಾಂಸದ ಬೆಲೆ 400ಕ್ಕೆ ಏರಿಕೆಯಾಗಿದೆ. ಕೆಜಿಗೆ 350ಕ್ಕೆ ಮಾರಾಟವಾಗುತ್ತಿದ್ದ ಮಟನ್ 600ಕ್ಕೆ ಮಾರಾಟವಾಗುತ್ತಿದೆ. ಕೋಳಿ ಮಾಂಸದ ಬೆಲೆಯೂ ದ್ವಿಗುಣಗೊಂಡಿದ್ದು, ಕೆಜಿಗೆ 260 ರು. ತಲುಪಿದೆ. ಸಿಎಂ ಯೋಗಿ ಆದಿತ್ಯನಾಥ್ ಅಕಾರಕ್ಕೆ ಬಂದ ಬಳಿಕ ರಾಜ್ಯದ ಬಹುತೇಕ ಅಕ್ರಮ ಕಸಾಯಿಖಾನೆಗಳು ಮುಚ್ಚಲ್ಪಟ್ಟಿವೆ.