ಚನ್ನಪಟ್ಟಣದಲ್ಲಿ  ಕಾಂಗ್ರೆಸ್-ಜೆಡಿಎಸ್ ಒಳಒಪ್ಪಂದ ಆರೋಪ ಸುಳ್ಳು: ಎಚ್‌ಡಿಕೆ

ಬೆಂಗಳೂರು: ‘ರಾಜ್ಯದ ಚನ್ನಪಟ್ಟಣ ಮಾತ್ರವಲ್ಲ ಯಾವ ಕ್ಷೇತ್ರದಲ್ಲೂ ಫ್ರೆಂಡ್ಲಿ ಫೈಟ್ ಇಲ್ಲ. ಪಕ್ಷ ಬಲವರ್ಧನೆಗೊಂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತೇವೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಎ.ಮಂಜುನಾಥ್ (ಎ.ಮಂಜು) ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಕುಮಾರಸ್ವಾಮಿ ಮಾತನಾಡಿದರು.

ನನ್ನನ್ನು ಚನ್ನಪಟ್ಟಣದಲ್ಲಿ ಎದುರಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಆ ಕ್ಷೇತ್ರದ ನಾಯಕರೊಬ್ಬರು ಹೇಳಿದ್ದಾರೆ. ಆ ನಾಯಕರು (ಸಿ.ಪಿ. ಯೋಗೇಶ್ವರ್) ತಮ್ಮ ಮೇಲಿನ ಮೆಗಾ ಸಿಟಿ ಹಗರಣವನ್ನು ಮುಚ್ಚಿ ಹಾಕಿಸಲು ಯಾರ್ಯಾರ ಮನೆ ಬಾಗಿಲಿಗೆ ಹೋಗಿ ನಿಂತಿದ್ದರು ಎಂಬ ಸಂಗತಿ ಗೊತ್ತಿದೆ. ಚನ್ನಪಟ್ಟಣದಲ್ಲಿ ಫ್ರೆಂಡ್ಲಿ ಫೈಟ್ ಎಂಬುದೆಲ್ಲ ಸುಳ್ಳು ಎಂದು ಹರಿಹಾಯ್ದರು. ಕಳಂಕಿತ ವ್ಯಕ್ತಿಯನ್ನು ಪಕ್ಷದ ರಾಜ್ಯದ ಉಸ್ತುವಾರಿಯಾಗಿ ನೇಮಿಸಿರುವುದು ಕಾಂಗ್ರೆಸ್ ಪಕ್ಷದ ದುರ್ಗತಿ ಎತ್ತಿ ತೋರಿಸುತ್ತದೆ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

ವೇಣುಗೋಪಾಲ್ ಅವರು ಸರ್ಕಾರದ ಪ್ರತಿನಿಧಿ ಅಲ್ಲ. ಹಾಗಾಗಿ ಅವರ ರಾಜೀನಾಮೆ ಅಥವಾ ಉಸ್ತುವಾರಿಯಿಂದ ಬಿಡುಗಡೆಗೊಳಿಸುವಂತೆ ನಾವು ಒತ್ತಾಯಿಸುವುದಿಲ್ಲ ಎಂದರು.

ಬಸ್ಸಲ್ಲೇ ಕಮೋಡ್ ಇದೆ: ‘ಎಚ್‌ಡಿಕೆ ಗ್ರಾಮವಾಸ್ತವ್ಯಕ್ಕೆ ಕಮೋಡ್ ಒಯ್ತಾರೆ ಎಂದು ಗ್ರಾಮ ವಾಸ್ತವ್ಯ ಕುರಿತು ವ್ಯಂಗ್ಯವಾಡುವ ಮುಖ್ಯಮಂತ್ರಿಗಳಿಗೆ ತಿರುಗೇಟು ನೀಡಿದ ಎಚ್‌ಡಿ ಕುಮಾರಸ್ವಾಮಿ, ವಿಕಾಸವಾಹಿನಿ ಬಸ್ಸಿನಲ್ಲೇ ಕಮೋಡ್ ಇದೆ. ಈ ಬಗ್ಗೆ ವಿಷಯ ತಿಳಿದು ಮಾತನಾಡಬೇಕು.ಎಂದು ಕಿಡಿಕಾರಿದರು.