ಡ್ಯಾಂಗಳ ಮೇಲೆ ಕಾವೇರಿ ನಿರ್ವಹಣಾ ಮಂಡಳಿ ನಿಯಂತ್ರಣವಿರುವುದಿಲ್ಲ :ಶಶಿಶೇಖರ್
ನವದೆಹಲಿ (ಸೆ.26): ಕಾವೇರಿ ನದಿ ನೀರು ಎಷ್ಟುಪ್ರಮಾಣದಲ್ಲಿದೆ ಎಂಬುದನ್ನು ಆಧರಿಸಿ ಯಾವ ರಾಜ್ಯಕ್ಕೆ ಎಷ್ಟುಪ್ರಮಾಣದ ನೀರು ಬಿಡುಗಡೆ ಮಾಡಬೇಕೆಂಬುದನ್ನು ‘ಕಾವೇರಿ ನಿರ್ವಹಣಾ ಮಂಡಳಿ’ ನಿಯಂತ್ರಿಸಲಿದೆ. ಆದರೆ, ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿರುವ 8 ಅಣೆಕಟ್ಟುಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡುವುದಿಲ್ಲ ಎಂದು ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಶಶಿ ಶೇಖರ್ ಹೇಳಿದ್ದಾರೆ.
ಕರ್ನಾಟಕ, ತಮಿಳುನಾಡು ಮತ್ತು ಕೇರಳ ನಡುವಿನ ಕಾವೇರಿ ವಿವಾದದ ನಿವಾರಣೆಗಾಗಿ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ ಮಾಡಲಾಗುತ್ತಿದ್ದು, ಇದರಲ್ಲಿ ಮೂರು ರಾಜ್ಯಗಳ ಲೋಕೋಪಯೋಗಿ ಇಲಾಖೆ ಅಥವಾ ಕೃಷಿ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಿರಲಿದೆ ಎಂದು ಕಾರ್ಯದರ್ಶಿ ಶಶಿ ಶೇಖರ್ ಹೇಳಿದ್ದಾರೆ ಎಂದು ‘ದ ಹಿಂದೂ’ ಪತ್ರಿಕೆ ವರದಿ ಮಾಡಿದೆ.
ಈ ಪ್ರಕಾರ ಕೇರಳದ ಬಾನಾಸುರ ಸಾಗರ್, ಕರ್ನಾಟಕದ ಕೃಷ್ಣರಾಜಸಾಗರ ಸೇರಿದಂತೆ ಒಟ್ಟು ನಾಲ್ಕು ಜಲಾಶಯ ಮತ್ತು ತಮಿಳುನಾಡಿನ ಜಲಾಶಯಗಳಲ್ಲಿ ಶೇಖರವಾದ ನೀರನ್ನು ಸಂದರ್ಭಕ್ಕನುಗುಣವಾಗಿ ಹೇಗೆ ಬಳಕೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಮಂಡಳಿ ಮಾರ್ಗದರ್ಶನದಂತೆ ನಿರ್ವಹಣೆ ಮಾಡಲಾಗುತ್ತದೆ.