ಮಂಡ್ಯ ಲೋಕಸಭಾ ಕ್ಷೇತ್ರದಿಂದ ಒಮ್ಮೆ ಅಂಬರೀಶ್ ಪುತ್ರ ಅಭಿಷೇಕ್ ಸ್ಪರ್ಧೆ ಮಾಡುತ್ತಾರೆ ಎಂದರೆ ಇನ್ನೊಮ್ಮೆ ಸಿಎಂ ಎಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಸ್ವತಃ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯ[ಜ.11] ನಾನು ಲೋಕಸಭೆಗೆ ಸ್ಪರ್ಧೆ ಮಾಡುವ ನಿರ್ಧಾರ ಮಾಡಬೇಕಿರುವುದು ನಮ್ಮ ಪಕ್ಷದ ವರಿಷ್ಠರು ಎನ್ನುವ ಮೂಲಕ ಪರೋಕ್ಷವಾಗಿ ಮಂಡ್ಯ ಲೋಕಸಭೆಗೆ ಸ್ಪರ್ಧೆ ಮಾಡುವ ಸುಳಿವನ್ನು ನಿಖಿಲ್ ಕುಮಾರಸ್ವಾಮಿ ನೀಡಿದ್ದಾರೆ.
ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿ, ಮಂಡ್ಯ ಲೋಕಸಭೆಯ ಎಂಟು ಕ್ಷೇತ್ರದ ಶಾಸಕರ ತೀರ್ಮಾನಕ್ಕೆ ನಾನು ಬಧ್ದವಾಗಿರುತ್ತೇನೆ. ನಾನು ಚಿತ್ರನಟನಾಗಿದ್ರು ನನಗೆ ದೊಡ್ಡ ಜವಾಬ್ದಾರಿ ಇದೆ. ನಮ್ಮ ತಂದೆ ಅವರ ಜತೆ ಹಲವು ಸಾರಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು.
ಹಾಸನದಿಂದ ಪ್ರಜ್ವಲ್, ಮಂಡ್ಯದಿಂದ ನಿಖಿಲ್ಗೆ ಟಿಕೆಟ್ ಖಚಿತ?
ನಾವು ಈಗ ಸಮ್ಮಿಶ್ರ ಸರಕಾರದಲ್ಲಿದ್ದೇವೆ. ಕುಮಾರಣ್ಣ ಚುನಾವಣಾ ಪೂರ್ವ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಯತ್ನ ಮಾಡ್ತಿದ್ದಾರೆ. ರೈತರ ಸಂಪೂರ್ಣ ಸಾಲಮನ್ನಾ ಆಗ್ಬೇಕು ಅನ್ನೋ ನಿಟ್ಟಿನಲ್ಲಿ ನಮ್ಮ ತಂದೆ ಕೆಲಸ ಮಾಡ್ತಿದ್ದಾರೆ. ನಾನು ರಾಜಕಾರಣಕ್ಕೆ ನನ್ನ ಸ್ವಾರ್ಥಕ್ಕೊಸ್ಕರ ಬರೋದಾದ್ರೆ ನನಗೆ ರಾಜಕಾರಣವೇ ಬೇಡ. ಇದು ನನಗೆ ನಾನೇ ಹಾಕಿಕೊಳ್ಳುವ ಪ್ರಶ್ನೆ. ನಾನು ಇವಾಗ ತಾನೇ ಚಿತ್ರರಂಗದಲ್ಲಿ ಹೆಜ್ಜೆ ಇಡುತ್ತಿದ್ದೇನೆ. ನನ್ನ ತಂದೆಗೆ ಚಿತ್ರರಂಗದ ಮೇಲೆ ತುಂಬಾ ಒಲವಿದೆ ಎಂದರು.
ಸೀತಾರಾಮ ಕಲ್ಯಾಣದಲ್ಲಿನ ನನ್ನ ನಟನೆ ನೋಡಿದ ನಂತರ ನನ್ನನ್ನು ರಾಜಕೀಯ ಹಾದಿ ತುಳಿಸಿ ನನ್ನಲ್ಲಿನ ಪ್ರತಿಭೆಯನ್ನ ಡಿಸ್ಟರ್ಬ್ ಮಾಡ್ಬೇಕಾ ಅನ್ನೋ ಭಾವನೆ ನನ್ನ ತಂದೆಗೆ ಇದೆ. ನಾನು ಯಾವದೇ ಕಾರಣಕ್ಕೂ ಚಿತ್ರರಂಗ ಬಿಡುವುದಿಲ್ಲ. ಮಂಡ್ಯ ರಾಜಕೀಯಕ್ಕೆ ಬರುವುದನ್ನು ತೀರ್ಮಾನಿಸಲು ನಾನು ಯಾರು..? ಜಿಪಂ ಸದಸ್ಯರು ಶಾಸಕರು ನನ್ನನ್ನು ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ನಿಖಿಲ್ ಹೇಳಿದರು.
