ಶಾಸಕರ ಸಭೆಯಲ್ಲಿ ನಿಖಿಲ್: ಜನಪ್ರತಿನಿಧಿಯೇ ಅಲ್ಲದ ಸಿಎಂ ಪುತ್ರನಿಗೇನು ಕೆಲಸವಿಲ್ಲಿ?
ಲೋಕಸಭಾ ಚುನಾವಣೆ ಮುಕ್ತಾಯವಾದ ಈ ಸಂದರ್ಭದಲ್ಲಿ ಅಭ್ಯರ್ಥಿಗಳು ಸ್ವಲ್ಪ ನಿರಾಳರಾಗಿದ್ದು, ಹಲವು ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಕೂಡ ಜೆಡಿಎಸ್ ಶಾಸಕರ ಸಭೆಯಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರು : ಭಾನುವಾರ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಿದ್ದರು.
ಸಾಮಾನ್ಯವಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು, ಮಂತ್ರಿಗಳು ಭಾಗಿಯಾಗುವುದು ವಾಡಿಕೆ. ಬೇರೆಯವರಿಗೆ ಅಧಿಕೃತ ಆಹ್ವಾನ ಇದ್ದರೆ ಮಾತ್ರ ಪಾಲ್ಗೊಳ್ಳಬಹುದು.
ಆದರೆ, ಪಕ್ಷದ ಇತರ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳಿಲ್ಲದೆ ಕೇವಲ ನಿಖಿಲ್ ಕುಮಾರಸ್ವಾಮಿ ಅವರೊಬ್ಬರೇ ಸಭೆಯಲ್ಲಿ ಪಾಲ್ಗೊಂಡಿದ್ದು ಅಚ್ಚರಿ ಮೂಡಿಸಿತು. ಅವರೊಬ್ಬರಿಗೆ ಆಹ್ವಾನ ಇದ್ದುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಭ್ಯರ್ಥಿಯ ಎದುರೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಮತದಾನದ ಗುಪ್ತಚರ ವರದಿ ಪ್ರಸ್ತಾಪಿಸಿ, ಶಾಸಕ, ಸಚಿವರೊಂದಿಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.