ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಯಾವ್ಯಾವ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಲಾಗಿದೆಯೋ ಅಲ್ಲಿ, ಪರಿಸರಕ್ಕೆ ಮಾರಕವಾಗುವ ಯಾವುದೇ ಯೋಜನೆಗೆ ಅನುಮತಿ ನೀಡಬಾರದು ಎಂದು ಹಸಿರು ನ್ಯಾಯಪೀಠ ಒಟ್ಟು 6 ರಾಜ್ಯಗಳಿಗೆ ಸೂಚನೆ ನೀಡಿದೆ.

ನವದೆಹಲಿ: ಪಶ್ಚಿಮ ಘಟ್ಟದ ಜೀವವೈವಿಧ್ಯ ಗಂಭೀರ ಸ್ವರೂಪದ ಒತ್ತಡದಲ್ಲಿದೆ ಎಂದು ಹೇಳಿರುವ ರಾಷ್ಟ್ರೀಯ ಹಸಿರು ನ್ಯಾಯಪೀಠ, ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ, ಜೀವವೈವಿಧ್ಯಕ್ಕೆ ಹಾನಿಯಾಗುವ ಯಾವುದೇ ಯೋಜನೆಗಳಿಗೆ ಪರಿಸರ ಅನುಮೋದನೆ ನೀಡದಂತೆ ಕರ್ನಾಟಕ ಸೇರಿ 6 ರಾಜ್ಯಗಳಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ನ್ಯಾ.ಆದರ್ಶ ಕುಮಾರ್‌ ಗೋಯಲ್‌ ಅಧ್ಯಕ್ಷತೆಯ ನ್ಯಾಯಪೀಠ ಈ ಸೂಚನೆ ಹೊರಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2014ರ ಸೆ.25ರಂದು ಹೊರಡಿಸಿದ್ದ ಆದೇಶದಲ್ಲಿ ಯಾವ್ಯಾವ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಲಾಗಿದೆಯೋ ಅಲ್ಲಿ, ಪರಿಸರಕ್ಕೆ ಮಾರಕವಾಗುವ ಯಾವುದೇ ಯೋಜನೆಗೆ ಅನುಮತಿ ನೀಡಬಾರದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಇದೇ ವೇಳೆ ಆ.26ಕ್ಕೆ ಮುಕ್ತಾಯಗೊಂಡಿರುವ ಪಶ್ಚಿಮ ಘಟ್ಟಗಳ ಕರಡು ಸುತ್ತೋಲೆಯನ್ನು ಮರುಪ್ರಕಟಿಸಲು ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ನ್ಯಾಯಾಧಿಕರಣ ಅನುಮತಿ ನೀಡಿದೆ. ಅಲ್ಲದೆ, ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದ 2017, ಫೆ.27ರ ಸುತ್ತೋಲೆಯ ಮಾದರಿಯಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ವಿಷಯವನ್ನು ಆರು ತಿಂಗಳೊಳಗೆ ಅಂತಿಮಗೊಳಿಸುವಂತೆ ಅದು ಸೂಚಿಸಿದೆ. ಜೊತೆಗೆ ಸುತ್ತೋಲೆಗೆ ಸಂಬಂಧಿಸಿ ಆಕ್ಷೇಪ ಸಲ್ಲಿಕೆಗೆ ರಾಜ್ಯಗಳು ವಿಳಂಬ ಮಾಡಿರುವುದಕ್ಕೂ ನ್ಯಾಯಾಧಿಕರಣ ತರಾಟೆಗೆ ತೆಗೆದುಕೊಂಡಿದೆ. ರಾಜ್ಯ ಸರ್ಕಾರಗಳ ಇಂಥ ನಡೆ, ಪರಿಸರ ಸೂಕ್ಷ್ಮ ವಲಯವನ್ನು ಕಾಪಾಡಲು ಸೂಕ್ತವಾದುದಲ್ಲ ಎಂದು ಕಿಡಿಕಾರಿದೆ.

ಇದಕ್ಕೂ ಮುನ್ನ, ಪಶ್ಚಿಮ ಘಟ್ಟಪ್ರದೇಶದಲ್ಲಿ ಹೇರಲಾದ ನಿಷೇಧಾತ್ಮಕ ಮತ್ತು ನಿಯಂತ್ರಕ ನೀತಿಗಳಿಗೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದೆ. ಗೋವಾ, ಗುಜರಾತ್‌ ತಮ್ಮ ನಿಲುವುಗಳನ್ನೇ ಸಲ್ಲಿಸಿಲ್ಲ ಎಂದು ನ್ಯಾಯಾಧಿಕರಣಕ್ಕೆ ಸಚಿವಾಲಯ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಿಳಿಸಲಾಗಿತ್ತು.

ಕರ್ನಾಟಕ, ಗುಜರಾತ್‌, ಗೋವಾ, ಕೇರಳ, ತಮಿಳುನಾಡು, ಮಹಾರಾಷ್ಟ್ರಕ್ಕೆ ಸೇರಿದ 56,825 ಚದರ ಕಿ.ಮೀ. ವ್ಯಾಪ್ತಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಸಚಿವಾಲಯದ ಕರಡು ಸುತ್ತೋಲೆಯಲ್ಲಿ ಗುರುತಿಸಲಾಗಿದೆ.