ಲೋಕಸಭಾ ಚುನಾವಣಾ ಕಾವಿನ ಬೆನ್ನಲ್ಲೇ ರಾಜ್ಯದಲ್ಲಿ ಮಳೆ ಸುರಿದು ಭುವಿಯನ್ನು ತಂಪಾಗಿಸಿದೆ. ಇನ್ನೂ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರು : ತೀವ್ರ ಬಿಸಿಲಿನಿಂದ ಬಳಲಿದ ನಾಡಿಗೆ ವರುಣನ ಸಿಂಚನವಾಗಿದೆ. ರಾಜ್ಯದ ಹಲವೆಡೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ತಂಪಾಗಿದೆ.
ಕಾವಿನಿಂದ ಕುದಿಯುತ್ತಿದ್ದ ಉದ್ಯಾನನಗರಿಯಲ್ಲಿಯೂ ಕೂಡ ಬುಧವಾರ ಮೊದಲ ಮಳೆಯ ಸಿಂಚನವಾಗಿದ್ದು, ಏಕಾಏಕಿ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
ಗುಡುಗು- ಮಿಂಚು ಸಹಿತ 73 ಮಿ.ಮೀ.ವರೆಗೆ ಸುರಿದ ಭಾರಿ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಗಾಳಿ-ಮಳೆಗೆ ನಗರದ ವಿವಿಧೆಡೆ ಹತ್ತಾರು ಮರಗಳು ಧರೆಗುರುಳಿವೆ.
ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡು ಹಾಗೂ ರಾಜ್ಯದ ಹಲವು ಪ್ರದೇಶದಲ್ಲಿ ಮಳೆಯಾಗಿದೆ. ಈ ಮಳೆಯು ಗುರುವಾರ ಮತ್ತು ಶುಕ್ರವಾರವೂ ಮುಂದುವರೆಯುವ ಮುನ್ಸೂಚನೆ ಇದೆ. ಹೀಗಾಗಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆ ನಿರೀಕ್ಷಿಸಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
