ಬೆಂಗಳೂರು (ಸೆ.17): ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಉಂಟಾದ ಗಲಭೆ ಸಂದರ್ಭದಲ್ಲಿ 42 ಬಸ್ಗಳಿಗೆ ಬೆಂಕಿ ಹಚ್ಚಿರುವ ಪ್ರಕರಣಕ್ಕೆ ಹೊಸ ಟ್ವಿಸ್ಟ್ ವರದಿಯಾಗಿದೆ.
ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆಗೆ ಪ್ರತಿಯಾಗಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಆ ಸಂದರ್ಭದಲ್ಲಿ ಕೆಪಿಎನ್ ಸಂಸ್ಥೆಗೆ ಸೇರಿದ 42 ಬಸ್ಸುಗಳಿಗೆ ಬೆಂಕಿ ಹಚ್ಚಿ ಸುಡಲಾಗಿತ್ತು. ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಆದರೆ ಇದೀಗ ಬಸ್ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೆಪಿಎನ್ ಟ್ರಾವೆಲ್ಸ್ ಸಿಬ್ಬಂದಿಯಿಂದಲೇ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಕೆಪಿಎನ್ ಟ್ರಾವೆಲ್ಸ್ ಸಿಬ್ಬಂದಿಯೇ ಬಸ್ಸುಗಳಿಗೆ ಬೆಂಕಿ ಹಚ್ಚಿರುವ ಬಗ್ಗೆ ಕೆಪಿಎನ್ ಬಸ್ ಚಾಲಕ ವೆಂಕಟಚಲಂ ತನ್ನ ದೂರಿನಲ್ಲೇ ಸಂದೇಹ ವ್ಯಕ್ತಪಡಿಸಿದ್ದಾರೆಂದು ಸುವರ್ಣ ನ್ಯೂಸ್ ಗೆ ಸಿಐಡಿ ಮೂಲಗಳು ತಿಳಿಸಿವೆ.
