ಭ್ರಷ್ಟಾಚಾರದ ಕುರಿತು ವರದಿ ಮಾಡಿದರೆ 2 ವರ್ಷ ಜೈಲು!
ರಾಜಸ್ಥಾನ ಸಿಎಂ ವಸುಂಧರಾ ರಾಜೇ ಅವರು ಭ್ರಷ್ಟ ಅಧಿಕಾರಿಗಳ ರಕ್ಷಿಸಲು ನೆರವು ನೀಡಬಲ್ಲಂಥ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿದ್ದಾರೆ. ಬಿಜೆಪಿ ಸರ್ಕಾರದ ಈ ನಿರ್ಧಾರ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಜೈಪುರ(ಅ.21): ರಾಜಸ್ಥಾನ ಸಿಎಂ ವಸುಂಧರಾ ರಾಜೇ ಅವರು ಭ್ರಷ್ಟ ಅಧಿಕಾರಿಗಳ ರಕ್ಷಿಸಲು ನೆರವು ನೀಡಬಲ್ಲಂಥ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿದ್ದಾರೆ. ಬಿಜೆಪಿ ಸರ್ಕಾರದ ಈ ನಿರ್ಧಾರ ತೀವ್ರ ವಿವಾದಕ್ಕೆ ಕಾರಣವಾಗಿದೆ.
ರಾಜಸ್ಥಾನ ಸರ್ಕಾರ ಹೊರಡಿಸಿರುವ ನೂತನ ಸುಗ್ರೀವಾಜ್ಞೆ ಅನ್ವಯ ಯಾವುದೇ ನಿವೃತ್ತ ಅಥವಾ ಹಾಲಿ ಕಾರ್ಯನಿರ್ವಹಿಸುತ್ತಿರುವ ಜಡ್ಜ್ಗಳು, ಮ್ಯಾಜಿಸ್ಟ್ರೇಟ್ ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರದ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ. ಕರ್ತವ್ಯದ ಅವಧಿಯಲ್ಲಿ ಕೈಗೊಂಡ ಯಾವುದೇ ನಿರ್ಧಾರಕ್ಕೆ ಈ ನಿಯಮ ಅನ್ವಯವಾಗಲಿದೆ.
ಒಂದು ವೇಳೆ ತನಿಖೆಗೆ ಕೋರಿಕೆ ಬಂದರೆ ಆ ಬಗೆ ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ 6 ತಿಂಗಳ ಕಾಲಾವಕಾಶ ಇರುತ್ತದೆ. ಒಂದು ವೇಳೆ ಈ ಅವಧಿಯಲ್ಲಿ ಅನುಮತಿ ನಿರಾಕರಿಸಿದರೆ ತನಿಖೆ ನಡೆಸುವಂತಿಲ್ಲ. ಯಾವುದೇ ಆರೋಪದ ಕುರಿತು ತನಿಖೆಗೆ ಆದೇಶಿಸುವವರೆಗೂ ಆ ಕುರಿತು ಮಾಧ್ಯಮಗಳು ವರದಿ ಪ್ರಕಟಿಸುವಂತಿಲ್ಲ. ಇದನ್ನು ಮೀರಿದವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿರುತ್ತದೆ.