ದುಡ್ಡಿನ 'ಕ್ರಾಂತಿ' ಮಾಡುತ್ತಿದ್ದ ನಕ್ಸಲ್ ಮುಖಂಡನ ಆಸ್ತಿ ಜಪ್ತಿ
ಸಮತೆಯ ನಾಡಿಗಾಗಿ ರಕ್ತಕ್ರಾಂತಿ ಎನ್ನುತ್ತಾ ದುರ್ಮಾರ್ಗದಿಂದ ನಕ್ಸಲೀಯರು ಹಣ ಸಂಪಾದಿಸುವುದು ಹೊಸದೇನಲ್ಲ. ದರೋಡೆ ಸೇರಿದಂತೆ ಇತರ ಅಕ್ರಮ ಮಾರ್ಗದ ಮೂಲಕ ಅಪಾರ ಹಣ ಸಂಗ್ರಹಿಸಿದ್ದ ಬಿಹಾರದ ನಕ್ಸಲ್ ಮುಖಂಡನೋರ್ವನ ಆಸ್ತಿ ಜಪ್ತಿ ಮಾಡಲಾಗಿದೆ.
ನವದೆಹಲಿ [ಮೇ 31]: ಸಮತೆಯ ನಾಡಿಗಾಗಿ ರಕ್ತಕ್ರಾಂತಿ ಎನ್ನುತ್ತಾ ದುರ್ಮಾರ್ಗದಿಂದ ನಕ್ಸಲೀಯರು ಹಣ ಸಂಪಾದಿಸುವುದು ಹೊಸದೇನಲ್ಲ. ದರೋಡೆ ಸೇರಿದಂತೆ ಇತರ ಅಕ್ರಮ ಮಾರ್ಗದ ಮೂಲಕ ಅಪಾರ ಹಣ ಸಂಗ್ರಹಿಸಿದ್ದ ಬಿಹಾರದ ನಕ್ಸಲ್ ಮುಖಂಡನೋರ್ವನ ಆಸ್ತಿ ಜಪ್ತಿ ಮಾಡಲಾಗಿದೆ.
ತನ್ನ ಅಳಿಯನ ಕುಟುಂಬಸ್ಥರ ಖಾತೆಗಳಿಗೆ ಠೇವಣಿ ಮಾಡಿದ್ದ 40 ಲಕ್ಷ ರೂ. ಕಪ್ಪುಹಣ ಸೇರಿದಂತೆ ಒಟ್ಟು 77 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಬಿನಯ್ ಯಾದವ್ ಅಲಿಯಾಸ್ ಕಮಲ್ ಜೀ ಮಾವೋವಾದಿಯ ಹಿರಿಯ ಮುಖಂಡನಾಗಿದ್ದು, ಆತನ ಆಸ್ತಿಯನ್ನು ಅಕ್ರಮ ಹಣ ವ್ಯವಹಾರ ತಡೆ ಕಾಯ್ದೆಯಡಿ ಜಪ್ತಿ ಮಾಡಲಾಗಿದೆ. ಅಕ್ರಮವಾಗಿ ಸಂಪಾದನೆ ಮಾಡುತ್ತಿದ್ದ ಹಣವನ್ನು ಬಿನಯ್ ಯಾದವ್ ತನ್ನ ಅಳಿಯ, ತನ್ನ ಪತ್ನಿ, ತನ್ನ ತಂದೆ ಖಾತೆಗಳಿಗೆ ಹಾಕುತ್ತಿದ್ದ.
ಈ ಹಿನ್ನೆಲೆಯಲ್ಲಿ ಔರಂಗಬಾದ್ ಜಿಲ್ಲೆಯಲ್ಲಿರುವ 6 ಪ್ಲಾಟ್ಗಳು, 3 ಬಸ್ಗಳು, ಬೊಲೆರೊ ಎಸ್ಯುವಿ ಕಾರು, ಮಿನಿ ವ್ಯಾನ್ ಮತ್ತು 7 ಬ್ಯಾಂಕ್ ಖಾತೆಗಳಲ್ಲಿನ ಹಣ ಸೇರಿದಂತೆ ಇತರ ಆಸ್ತಿಗಳನ್ನು ಗುರುವಾರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.