ಗರ್ಭಿಣಿಯ ರಕ್ಷಕನಾದ ಸೇನಾ ಸಾಹಸ
ಇಂದು ಬೆಳಿಗ್ಗೆ 8 ಗಂಟೆಗೆ ವಿಜಯ್ ಶರ್ಮಾ ನೇತೃತ್ವದ ನೌಕಾ ಪಡೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಹೆಲಿಕಾಪ್ಟರ್ ಮೂಲಕ ಮಹಿಳೆಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು.
ತಿರುವನಂತಪುರ[ಆ.17]: ನೆರೆಯಲ್ಲಿ ಸಿಲುಕಿಕೊಂಡಿದ್ದ ಗರ್ಭಿಣಿಯೊಬ್ಬರನ್ನು ಸೇನಾ ಸಿಬ್ಬಂದಿ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಎರ್ನಾಕುಲಂನ ಕಾಲಾಡಿಯಲ್ಲಿ ನಡೆದಿದೆ.
25 ವರ್ಷದ ಗರ್ಭಿಣಿ ಸಜೀತಾ ಜಬೀಲ್ ಮಳೆ ಪೀಡಿತ ಅಲುವಾ ಗ್ರಾಮದಲ್ಲಿ ಸಿಲುಕಿಕೊಂಡಿದ್ದರು. ವಿಪರೀತ ಮಳೆ ಬೀಳುತ್ತಿದ್ದ ಅಪಾಯದ ಸ್ಥಿತಿ ತಲುಪಿತ್ತು. ಇದೇ ಸಂದರ್ಭದಲ್ಲಿ ಸಹಾಯಕ್ಕಾಗಿ ಮಹಿಳೆಯ ಕುಟುಂಬದವರು ಸರ್ಕಾರದ ನೆರವು ಕೋರಿದರು.
ತಕ್ಷಣ ಜಾಗೃತರಾದ ನೌಕಾ ಸಿಬ್ಬಂದಿ ಇಂದು ಬೆಳಿಗ್ಗೆ 8 ಗಂಟೆಗೆ ವಿಜಯ್ ಶರ್ಮಾ ನೇತೃತ್ವದಲ್ಲಿ ಸ್ಥಳಕ್ಕಾಗಮಿಸಿ ಹೆಲಿಕಾಪ್ಟರ್ ಮೂಲಕ ಮಹಿಳೆಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಮಧ್ಯಾಹ್ನ 2 ಗಂಟೆ ವೇಳೆಗೆ ಗಂಡು ಮಹಿಳೆಗೆ ಜನ್ಮನೀಡಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಶತಮಾನದಲ್ಲಿ ಕಂಡೂ ಕೇಳಲರಿಯದ ಮಳೆ ಕೇರಳದಲ್ಲಿ ಸುರಿಯುತ್ತಿದೆ. ರಾಜ್ಯಕ್ಕೆ ರಾಜ್ಯವೇ ಅಕ್ಷರಶಃ ಮಳೆಯಲ್ಲಿ ತೇಲುತ್ತಿದೆ. 200 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಮಳೆಯಲ್ಲಿ ಸಿಲುಕಿರುವ ಜನತೆಯನ್ನು ರಕ್ಷಿಸುವ ಕೆಲಸ ಮಾಡುತ್ತಿದೆ.