ವಿಶ್ವ ಕಂಡ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಮಹಾನ್ ಕ್ರೀಡಾಪಟುವಿಗೆ ಗೌರವ ಮತ್ತು ನಮನ ಸಲ್ಲಿಕೆ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಬಿಜೆಪಿ ನಾಯಕ, ಶಾಸಕ ಸಿಟಿ ರವಿ ಮಾಡಿರುವ ಟ್ವೀಟ್ ವೊಂದು ಹೊಸ ಚರ್ಚೆ ಹುಟ್ಟುಹಾಕಿದೆ.
ಬೆಂಗಳೂರು(ಆ.29) ವಿಶ್ವವನ್ನೇ ಬೆರಗು ಮಾಡಿದ್ದ ಕ್ರೀಡಾಪಟು ಧ್ಯಾನ್ ಚಂದ್ ಹೆಸರನ್ನು ಶ್ರೇಷ್ಠ ಕ್ರೀಡಾ ಪುರಸ್ಕಾರವೊಂದಕ್ಕೆ ಇಡಬೇಕು ಎಂಬ ಮಾತು ಕೇಳಿ ಬಂದಿದೆ. ಬಿಜೆಪಿ ನಾಯಕ, ಶಾಸಕ ಸಿಟಿ ರವಿ ಮಾಡಿರುವ ಟ್ವೀಟ್ ಈ ಚರ್ಚೆಗೆ ನಾಂದಿ ಹಾಡಿದೆ
ಕ್ರೀಡಾ ದಿನದ ಈ ಸಂದರ್ಭದಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನದ ಹೆಸರು ಬದಲಾಯಿಸಿ ಅದಕ್ಕೆ ಧ್ಯಾನ್ ಚಂದ್ ಹೆಸರಿಡಿ. ದೇಶ ಕಂಡ ಕೆಟ್ಟ ಆಡಳಿತಗಾರನ ಹೆಸರು ಬದಲಾಯಿಸಿ ಎಂದು ಕೋರಿದ್ದಾರೆ.
ಇದಕ್ಕೆ ಕೆಲವು ಪ್ರತಿಕ್ರಿಯೆಗಳು ಬಂದಿದೆ. ಧ್ಯಾನ್ ಚಂದ್ ಅವರಿಗೆ 1956ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಭಾರತ ಸರಕಾರ ಗೌರವಿಸಿತ್ತು. 1928, 1932 ಹಾಗೂ 1936ರಲ್ಲಿ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದು ಕೊಟ್ಟಿರುವ ಧ್ಯಾನ್ ಚಂದ್ ಒಟ್ಟು 400 ಅಂತರಾಷ್ಟ್ರೀಯ ಗೋಲುಗಳನ್ನು ಬಾರಿಸಿದ್ದರು. ಹಾಗೆಯೇ 1948ರಲ್ಲಿ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಹಾಡಿದ್ದರು.
