ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟ ಭಾನುವಾರದಂದು ಕಲಬುರಗಿಯಲ್ಲಿ ನಡೆದ ಮಹ ರ‍್ಯಾಲಿ ಹಾಗೂ ಸಮಾವೇಶದ ಮೂಲಕ ಮತ್ತಷ್ಟು ತೀವ್ರಗೊಂಡಿದೆ. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರಮುಖ ಲಿಂಗಾಯತ ಮಠಾಧೀಶರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂತನವಾಗಿ ರಾಷ್ಟ್ರೀಯ ಬಸವ ಸೇನೆಗೆ ಚಾಲನೆ ನೀಡಲಾಗಿದ್ದು ಈ ಮೂಲಕ ಬಸವ ತತ್ವ ಪ್ರಚಾರ ಹಾಗೂ ಪ್ರತ್ಯೇಕ ಧರ್ಮದ ಹೋರಾಟ ಮುಂದುವರಿಸುವ ಘೋಷ ಮೊಳಗಿದೆ.

ಕಲಬುರಗಿ: ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟ ಭಾನುವಾರದಂದು ಕಲಬುರಗಿಯಲ್ಲಿ ನಡೆದ ಮಹ ರ‍್ಯಾಲಿ ಹಾಗೂ ಸಮಾವೇಶದ ಮೂಲಕ ಮತ್ತಷ್ಟು ತೀವ್ರಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರಮುಖ ಲಿಂಗಾಯತ ಮಠಾಧೀಶರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂತನವಾಗಿ ರಾಷ್ಟ್ರೀಯ ಬಸವ ಸೇನೆಗೆ ಚಾಲನೆ ನೀಡಲಾಗಿದ್ದು ಈ ಮೂಲಕ ಬಸವ ತತ್ವ ಪ್ರಚಾರ ಹಾಗೂ ಪ್ರತ್ಯೇಕ ಧರ್ಮದ ಹೋರಾಟ ಮುಂದುವರಿಸುವ ಘೋಷ ಮೊಳಗಿದೆ.

ರಾಜ್ಯದ ಹಳ್ಳಿಹಳ್ಳಿಗಳಿಂದ 25 ಲಕ್ಷಕ್ಕೂ ಅಧಿಕ ಯುವಕರನ್ನು ಬಸವ ಸೇನೆಯಲ್ಲಿ ಸೇರಿಸಲು ಭೂವಿಜ್ಞಾನ ಮತ್ತು ಗಣಿಗಾರಿಕೆ ಸಚಿವ ವಿನಯ ಕುಲಕರ್ಣಿ ಅವರಿಗೆ ಈ ರಾಷ್ಟ್ರೀಯ ಬಸವಸೇನೆಯ ಜವಾಬ್ದಾರಿ ನೀಡಲಾಗಿದೆ.

ಇದೇ ವೇಳೆ ಚಿತ್ರದುರ್ಗದಲ್ಲಿ ಸೆ.29ಕ್ಕೆ,, ಹುಬ್ಬಳ್ಳಿಯಲ್ಲಿ ನ.5ಕ್ಕೆ, ವಿಜಯಪುರದಲ್ಲಿ ನ.19ರಂದು ಸಮಾವೇಶಗಳನ್ನು ನಡೆಸಿ ಅಂತಿಮವಾಗಿ ಡಿ.10ರಂದು ಬೆಂಗಳೂರಲ್ಲಿ ರಾಷ್ಟ್ರೀಯ ಸಮಾವೇಶ ಸಂಘಟಿಸುವುದಾಗಿ ಘೋಷಣೆ ಮಾಡಲಾಗಿದೆ.

ಬೃಹತ್ ರ‍್ಯಾಲಿ: ಲಿಂಗಾಯತ ಸಮನ್ವಯ ವೇದಿಕೆಯಿಂದ ಹಮ್ಮಿಕೊಳ್ಳಲಾಗಿದ್ದ ಈ ರ‍್ಯಾಲಿಗೆ ನೆಹರು ಗಂಜ್‌ನಲ್ಲಿರುವ ಲಾಹೋಟಿ ಕಲ್ಯಾಣ ಮಂಟಪದಲ್ಲಿ ನಿಜಗುಣಾನಂದ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೇರವೇರಿಸುವ ಮೂಲಕ ಚಾಲನೆ ನೀಡಿದರು. ನೆರೆದಿದ್ದ ಸಹಸ್ರಾರು ಲಿಂಗಾಯತ ಸಮುದಾಯದವರು ಮೆರವಣಿಗೆ ಮೂಲಕ ಗಂಜ್, ಕಿರಾಣಾ ಬಜಾರ್, ಕಪಡಾ ಬಜಾರ್, ಸೂಪರ್ ಮಾರ್ಕೆಟ್, ಜಗತ್ ಮಾರ್ಗವಾಗಿ ನೂತನ ವಿದ್ಯಾಲಯದ ಮೈದಾನಕ್ಕೆ ತಲುಪಿ ಸಮಾವೇಶದಲ್ಲಿ ಪಾಲ್ಗೊಂಡರು. ಕಲಬುರ್ಗಿ ನೆಲದಲ್ಲಿ ಇದೇ ಮೊದಲ ಬಾರಿಗೆ ಪ್ರತ್ಯೇಕ ಧರ್ಮ ಹೋರಾಟದ ಶಕ್ತಿ ಪ್ರದರ್ಶನ ನಡೆಸಿದರು.

ಪ್ರತ್ಯೇಕ ಧರ್ಮ ವಿಚಾರ ಪರಿಶೀಲನೆ ನಡೆಸಲು ಪರಿಣತರ ಸಮಿತಿ ರಚನೆಯಾಗಿದೆ ಎಂದು ವರದಿಯಾಗುತ್ತಿದ್ದು, ಇದು ಸರಿಯಲ್ಲ. ವೀರಶೈವ ಲಿಂಗಾಯತ ಮಾನ್ಯತೆಗೆ ಕಳುಹಿಸಿದ ಮನವಿ ಎರಡು ಸಲ ತಿರಸ್ಕೃತವಾಗಿದೆ. ಹಾಗಾಗಿ ಅದಕ್ಕೆ ಪರ್ಯಾಯವಾಗಿ ಲಿಂಗಾಯತ ಧರ್ಮದ ಮಾನ್ಯತೆಗೆ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಕೈ ಜೋಡಿಸುವುದಾದರೆ ನಮ್ಮೊಂದಿಗೆ ಬನ್ನಿ, ಇಲ್ಲಿದಿದ್ದರೆ ನಮ್ಮ ಪಾಡಿಗೆ ನಮಗೆ ಬಿಟ್ಟುಬಿಡಿ ಎಂದು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖಂಡರು ಆಗ್ರಹಿಸಿದರು.

ಡಾ. ಕಲಬುರ್ಗಿ, ಗೌರಿ ಹತ್ಯೆಗೆ ಖಂಡನೆ: ಇದೇ ವೇಳೆ, ಸಂಶೋಧಕ ಡಾ. ಎಂಎಂ ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಮತ್ತು ಹಂತಕರನ್ನು ಪತ್ತೆಹಚ್ಚುವಂತೆ ಆಗ್ರಹಿಸಿ ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸಲಾಯಿತು.