Asianet Suvarna News Asianet Suvarna News

ಕರ್ನಾಟಕದ ಪರ ವಾದಿಸುವುದೇ ಇಲ್ಲ ಎಂದಿದ್ದ ನಾರಿಮನ್ ಮನಸ್ಸು ಬದಲಿಸಿದ್ದು ಯಾರು..?

nariman negotiation full details

ನವದೆಹಲಿ(ಅ.05): ಕರ್ನಾಟಕ ವಿಧಾನಮಂಡಲದಲ್ಲಿ ನಡೆದಿದ್ದ ವಿಶೇಷ ಅವೇಶನ ವೇಳೆ ಪ್ರತಿಪಕ್ಷ ನಾಯಕರು ಆಡಿದ್ದ ಮಾತುಗಳಿಂದ ಹಿರಿಯ ನ್ಯಾಯವಾದಿ ಫಾಲಿ ಎಸ್.ನಾರಿಮನ್ ಬೇಸರಗೊಂಡಿದ್ದರು. ಮಾತ್ರವಲ್ಲದೆ ‘‘ಕರ್ನಾಟಕ ಪರ ವಾದ ಮಂಡಿಸುವುದಿಲ್ಲ. ಬೇರೆ ವಕೀಲರನ್ನು ನೋಡಿಕೊಳ್ಳಿ,’’ ಎಂದು ಗುಡುಗಿದ್ದರು. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯದ ಹಿರಿಯ ನಾಯಕರಿಗೆ ನ್ಯಾಯಾಂಗ ಹೋರಾಟದಲ್ಲಿ ಏನು ಮಾಡಬೇಕೆಂದು ತೋಚದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿಯೇ ಮುಖ್ಯಮಂತ್ರಿಯವರು ಸೋಮವಾರ ತಡ ರಾತ್ರಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರನ್ನು ನವದೆಹಲಿಗೆ ಸಂಧಾನಕ್ಕಾಗಿ ಕಳುಹಿಸಿಕೊಟ್ಟಿದ್ದರು.

ನಾರಿಮನ್ ಮನವೊಲಿಸುವಂತೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಅನಂತಕುಮಾರ ಅವರೊಂದಿಗೆ ಸಿಎಂ ಮನವಿ ಮಾಡಿಕೊಂಡಿದ್ದರು. ಆ ಸಾಂಧನ ಯಶಸ್ವಿಯಾಗಿ ನಾರಿಮನ್ ಮಂಗಳವಾರ ರಾಜ್ಯಪರವಾಗಿ ಕೋರ್ಟ್‌ಗೆ ಹಾಜರಾದರು.

ಸೋಮವಾರ ರಾತ್ರಿ ಹಿರಿಯ ವಕೀಲ ಮೋಹನ ಕಾತರಕಿ ಸೇರಿದಂತೆ ಕರ್ನಾಟಕದ ಕಾನೂನು ತಂಡ ಬುಧವಾರದ ವಿಚಾರಣೆಯ ತಯಾರಿಗೆ ತೆರಳಿದ್ದಾಗ, ‘‘ಇನ್ನೊಮ್ಮೆ ಅವರಿಗೆ ನನ್ನ ಮನೆ ಹತ್ತಿರ ಬರುವ ಅವಶ್ಯಕತೆಯಿಲ್ಲ ಎಂದು ತಿಳಿಸಿಬಿಡಿ. ನಾನು ಹಣಕ್ಕೆ ವಾದಿಸುವವನಲ್ಲ. 37 ವರ್ಷ ರಾಜ್ಯಕ್ಕೆ ನಾನು ಸಲ್ಲಿಸಿರುವ ಸೇವೆಗೆ ಸ್ವಲ್ಪವೂ ಬೆಲೆಯಿಲ್ಲವೇ,’’ ಎಂದು ಅಕ್ರೋಶ ಭರಿತರಾಗಿ ಹೇಳಿದ್ದರು. ಇದರಿಂದಾಗಿ ಕೇಂದ್ರದ ಮಾರ್ಪಾಡು ಅರ್ಜಿ ಮತ್ತು ವಿಧಾನಸಭೆಯ ನಿರ್ಣಯದಿಂದಾಗಿ ಕಗ್ಗಂಟು ಬಗೆಹರಿಯಬಹುದು ಎಂದು ಅಂದುಕೊಂಡಿದ್ದ ರಾಜ್ಯ ಸರ್ಕಾರಕ್ಕೆ 87 ವರ್ಷದ ವೃದ್ಧ ವಕೀಲನನ್ನು ಸಂಭಾಳಿಸುವುದು ಹೇಗೆ ಎಂದು ಚಿಂತೆ ಶುರುವಾಗಿತ್ತು.

ರಾತ್ರಿ ಒಂದು ಗಂಟೆಗೆ ದೆಹಲಿಗೆ ಬಂದು ನಾರಿಮನ್ ಮಂಗಳವಾರ ಬೆಳಗ್ಗೆ ವಾಕಿಂಗ್ ಮುಗಿಸಿ ಬರುವಾಗ 7 ಗಂಟೆಗೆ ಹೌಜ್‌ಖಾಸ್‌ನಲ್ಲಿ ಹಿರಿಯ ನ್ಯಾಯವಾದಿ ನಿವಾಸಕ್ಕೆ ಬಂದ ಸಚಿವ ಎಂ.ಬಿ.ಪಾಟೀಲ್, ‘‘ಈ ಹಂತದಲ್ಲಿ ನೀವು ಹಿಂದೆ ಸರಿಯಬೇಡಿ. ಇಷ್ಟು ದಿನ ಮಾಡಿದ್ದೆಲ್ಲ ವ್ಯರ್ಥವಾಗುತ್ತದೆ. ಪ್ರತಿಪಕ್ಷಗಳು ರಾಜಕೀಯವಾಗಿ ಮಾತನಾಡುತ್ತವೆ. ಅವರ ಪರವಾಗಿ ನಾನು ಕ್ಷಮೆ ಕೋರುತ್ತೇನೆ,’’ ಎಂದು ಪರಿಪರಿಯಾಗಿ ವಿನಂತಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ ಸಚಿವ ಪಾಟೀಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ೆನ್‌ನಲ್ಲಿ ಮಾತನಾಡುವಂತೆ ಮನವಿಯನ್ನೂ ಮಾಡಿದರು. ಅದೇ ವೇಳೆಗೆ ಮಾಜಿ ಪ್ರಧಾನಿ ದೇವೇಗೌಡರು ಹಿರಿಯ ವಕೀಲಗೆ ಪತ್ರ ಬರೆದು ಫ್ಯಾಕ್ಸ್ ಮಾಡಿಸಿದರು. ತಕ್ಷಣವೇ ಓನ್‌ನಲ್ಲಿ ನಾರಿಮನ್ ಜತೆಗೆ ಮಾತನಾಡಿ, ‘‘ಎಲ್ಲರ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಒಂದು ವೇಳೆ ನೀವು ಮಂಗಳವಾರ ವಾದ ಮಾಡದೆ ಇದ್ದರೆ ಸಂಜೆ ರಾಜ್ಯದ ಅಷ್ಟೂ ಶಾಸಕರು ಸಂಸದರೊಂದಿಗೆ ನಿಮ್ಮ ಮನೆಯ ಮುಂದೆ ಧರಣಿ ಕೂರಬೇಕಾಗುತ್ತದೆ,’’ ಎಂದು ಹೇಳಿದಾಗ ನಾರಿಮನ್ ‘‘ಯಡಿಯೂರಪ್ಪ ಮತ್ತು ಈಶ್ವರಪ್ಪ ನೀಡಿರುವ ಹೇಳಿಕೆಯಿಂದ ಬೇಸರವಾಗಿದೆ. ನಿಮಗೆ ಬೇಕಿದ್ದಲ್ಲಿ ಬೇರೆ ವಕೀಲರನ್ನು ನೋಡಿಕೊಳ್ಳಿ. ಆದರೆ ನನ್ನ ವ್ಯಕ್ತಿತ್ವಕ್ಕೆ ಹಣ ಕೊಳ್ಳೆ ಹೊಡೆಯುವ ವಕೀಲ ಎಂಬ ರೀತಿಯಲ್ಲಿ ಬಣ್ಣ ಹಚ್ಚಿರುವುದು ನೋವಾಗಿದೆ,’’ ಎಂದು ಹೇಳಿಕೊಂಡಿದ್ದಾರೆ. ಆಗ ಕೇಂದ್ರ ಸಚಿವ ಅನಂತಕುಮಾರ್ ೆನ್ ಮಾಡಿ ‘‘ದಯವಿಟ್ಟು ವಾದದಿಂದ ಹಿಂದೆ ಸರಿಯಬೇಡಿ. ರಾಜ್ಯಕ್ಕೆ ಬಹಳ ಹಿನ್ನಡೆಯಾಗುತ್ತದೆ. ಈಗ ಎಲ್ಲವೂ ಬಗೆಹರಿಯುವ ಹಂತಕ್ಕೆ ಬಂದಿದೆ,’’ ಎಂದು ಮನವಿ ಮಾಡಿಕೊಂಡರು.

ರಾಜ್ಯದ ಸರ್ವ ಪಕ್ಷಗಳ ನಾಯಕರು ಮನವಿ ಮಾಡಿಕೊಂಡ ನಂತರ ಸ್ವಲ್ಪ ಮೆತ್ತಗಾದ ಫಾಲಿ ನಾರಿಮನ್ ಬೆಳಗ್ಗೆ 11 ಗಂಟೆ ಸುಮಾರಿಗೆ, ‘‘ಸರಿ ನಾನು ಇದೊಂದು ಬಾರಿ ವಾದ ಮಾಡುತ್ತೇನೆ ಆದರೆ ದಯವಿಟ್ಟು ನಿಮ್ಮ ರಾಜಕೀಯದಲ್ಲಿ ವೃತ್ತಿಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ನಮ್ಮನ್ನು ಎಳೆಯಬೇಡಿ. ನಾನು ಹೊರಗೆ ತೆಗೆದುಕೊಳ್ಳುವ ಶುಲ್ಕದ 30 ಪ್ರತಿಶತವನ್ನೂ ಕರ್ನಾಟಕದಿಂದ ತೆಗೆದುಕೊಳ್ಳುವುದಿಲ್ಲ. ಯಾವತ್ತಾದರೂ ಹಣ ಕೊಟ್ಟರೆ ವಾದ ಎಂದು ಹೇಳಿದ್ದೇನೆಯೇ,’’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಎದುರು ಅರ್ಧ ಗಂಟೆಯ ವರೆಗೆ ಮನಸ್ಸಿನ ದುಗುಡವನ್ನು ಹೇಳಿಕೊಂಡಿದ್ದಾರೆ.

ನಂತರ ರಾಜ್ಯದ ವಕೀಲರು, ಅಕಾರಿಗಳೊಂದಿಗೆ ಒಂದು ಗಂಟೆ ಸಭೆ ನಡೆಸಿ ನ್ಯಾಯಾಲಯಕ್ಕೆ ಬಂದ ಫಾಲಿ ನಾರಿಮನ್ ನ್ಯಾಯಪೀಠಕ್ಕೆ,‘‘ ನೀವು 15, 10, 6 ಸಾವಿರ ಎಂದು ಬಾಯಿಗೆ ಬಂದಂತೆ ಹೇಳಿದ್ದಕ್ಕೆಲ್ಲ ನಾವು ಒಪ್ಪಲು ಆಗುವುದಿಲ್ಲ,’’ ಎಂದು ಹೇಳಿದರು. ಕೋರ್ಟ್ ಮಾಡುತ್ತಿರುವ ತಪ್ಪನ್ನು ಮುಚ್ಚುಮರೆಯಿಲ್ಲದೆ ಹೇಳುವ ನೈತಿಕತೆ ಉಳಿಸಿಕೊಂಡಿರುವ ದೇಶದ ಕೆಲವೇ ನ್ಯಾಯವೇತ್ತರಲ್ಲಿ ನಾರಿಮನ್ ಒಬ್ಬರು. ಅವರೊಬ್ಬರೇ ಮಾತ್ರ ಹೀಗೆಲ್ಲ ಧೈರ್ಯದಿಂದ ಮಾತನಾಡಬಹುದು ಎಂದು ಕಿರಿಯ ವಕೀಲರು ಪಿಸುಗುಡುತ್ತಿದ್ದದ್ದು ನಾರಿಮನ್ ಎಂದರೆ ಏನು ಎಂಬುದನ್ನು ಸ್ಪಷ್ಟವಾಗಿ ದರ್ಶಿಸುತ್ತಿತ್ತು .