ಏಕಕಾಲಕ್ಕೆ ಚುನಾವಣೆ: ವಿಸ್ತೃತ ಚರ್ಚೆಗೆ ಪ್ರಧಾನಿ ಕರೆ
ಏಕಕಾಲಕ್ಕೆ ಚುನಾವಣೆ ವಿಸ್ತೃತ ಚರ್ಚೆಗೆ ಪ್ರಧಾನಿ ಕರೆ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕ ಕಾಲಕ್ಕೆ ಚುನಾವಣೆ
ಚರ್ಚೆಗೆ ಸಿದ್ದರಾಗುವಂತೆ ಎಲ್ಲ ರಾಜ್ಯಗಳಿಗೆ ಮೋದಿ ಮನವಿ
ನವದೆಹಲಿ(ಜೂ.17): ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕ ಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ವಿಸ್ತೃತ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲ ರಾಜ್ಯಗಳಿಗೆ ಕರೆ ನೀಡಿದ್ದಾರೆ.
ಇಂದು ಬಹುತೇಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದ ನೀತಿ ಆಯೋಗ ಮಂಡಳಿಯ ನಾಲ್ಕನೇ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಸಾರ್ವಜನಿಕರ ಹಣ ಉಳಿತಾಯ ಮಾಡಲು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ಒಟ್ಟಿಗೆ ನಡೆಸುವ ಬಗ್ಗೆ ವ್ಯಾಪಕ ಚರ್ಚೆ ಮತ್ತು ಸಮಾಲೋಚನೆ ನಡೆಸುವಂತೆ ಕರೆ ನೀಡಿದರು.
ಈ ವಿಷಯದಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕ ಅಭಿಪ್ರಾಯ ಹೊಂದಿದ್ದು, ಎಲ್ಲ ರಾಜ್ಯಗಳೂ ಈ ನಿಟ್ಟಿನಲ್ಲಿ ಚರ್ಚೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಬೇಕು ಎಂದು ಮೋದಿ ಮನವಿ ಮಾಡಿದರು. ಒಂದು ವೇಳೆ ಎಲ್ಲ ರಾಜ್ಯಗಳೂ ಒಪ್ಪಿಗೆ ನೀಡಿದಲ್ಲಿ, ಕೇಂದ್ರ ಸರ್ಕಾರ ಈ ಕುರಿತು ಕಾನೂನು ಮಾಡಲು ಸಿದ್ದ ಎಂದು ಅವರು ಭರವಸೆ ನೀಡಿದರು.
ಇದೇ ವೇಳೆ, ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿನ ಕಾರ್ಪೋರೇಟ್ ಹೂಡಿಕೆ ಅತ್ಯಂತ ಕಡಿಮೆ ಇದೆ. ಕೃಷಿ ಕ್ಷೇತ್ರದಲ್ಲಿನ ಕಾರ್ಪೋರೇಟ್ ಹೂಡಿಕೆ ಹೆಚ್ಚಿಸಲು ರಾಜ್ಯ ಸರ್ಕಾರ ನಿಯಮಗಳನ್ನು ಬದಲಿಸಬೇಕು ಎಂದು ಪ್ರಧಾನಿ ಸೂಚಿಸಿದ್ದಾರೆ.