ಶ್ರೀಕೃಷ್ಣನ ಸನ್ನಿಧಾನದಲ್ಲಿ ಸಾಮೂಹಿಕ ನಮಾಜು: ಮುಸ್ಲಿಂ ಮುಖಂಡರಿಗೆ ಇಫ್ತಾರ್ ಕೂಟ ಆಯೋಜನೆ
ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಅಪೂರ್ವ ಮಿಲನ ನಡೆಯಿತು. ಕಳಚಿಹೋಗುತ್ತಿರುವ ಸಂಬಂಧಗಳನ್ನು ಒಟ್ಟುಗೂಡಿಸುವ ಮರು ಪ್ರಯತ್ನ ನಡೀತು. ಪೇಜಾವರ ಮಠಾಧೀಶರು ತಮ್ಮ ಐತಿಹಾಸಿಕ ಐದನೇ ಪರ್ಯಾಯೋತ್ಸವದಲ್ಲಿ ಶ್ರೀಕೃಷ್ಣನ ಸನ್ನಿಧಾನದಲ್ಲಿ ನಮಾಜು ಮಾಡಿಸಿ ಕ್ರಾಂತಿಕಾರಿ ಹೆಜ್ಜೆ ಇರಿಸಿದರು.
ಉಡುಪಿ(ಜೂ.25): ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಅಪೂರ್ವ ಮಿಲನ ನಡೆಯಿತು. ಕಳಚಿಹೋಗುತ್ತಿರುವ ಸಂಬಂಧಗಳನ್ನು ಒಟ್ಟುಗೂಡಿಸುವ ಮರು ಪ್ರಯತ್ನ ನಡೀತು. ಪೇಜಾವರ ಮಠಾಧೀಶರು ತಮ್ಮ ಐತಿಹಾಸಿಕ ಐದನೇ ಪರ್ಯಾಯೋತ್ಸವದಲ್ಲಿ ಶ್ರೀಕೃಷ್ಣನ ಸನ್ನಿಧಾನದಲ್ಲಿ ನಮಾಜು ಮಾಡಿಸಿ ಕ್ರಾಂತಿಕಾರಿ ಹೆಜ್ಜೆ ಇರಿಸಿದರು.
ಕರಾವಳಿ ಅಂದ ತಕ್ಷಣ ಕೋಮು ಸೂಕ್ಷ್ಮ ಕಾರಣಗಳಿಗೆ ಸುದ್ದಿಯಾಗುವುದು ಜಾಸ್ತಿ. ಅದರಲ್ಲೂ ಹಿಂದೂ ಮುಸ್ಲಿಂ ಸಮುದಾಯದ ನಡುವೆ ಪದೇ ಪದೇ ಭಿನ್ನಮತ ಮೂಡಿ, ಸಂಘರ್ಷ ಏರ್ಪಡುವುದನ್ನೇ ಕಾಣುತ್ತೇವೆ. ಇಂತಹಾ ಸಂದರ್ಭದಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥರು, ಐತಿಹಾಸಿಕ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ರಂಜಾನ್ ಮಾಸದ ಕೊನೆಯ ಉಪವಾಸವನ್ನು ಕೃಷ್ಣಮಠದ ಆವರಣದಲ್ಲೇ ಪೂರೈಸಲು ಮುಸ್ಲೀಂ ಸಮುದಾಯದವರನ್ನು ಆಹ್ವಾನಿಸಿದ್ದರು. ಸ್ವಾಮೀಜಿಗಳ ಕರೆಗೆ ಓಗೊಟ್ಟು ದೊಡ್ಡ ಸಂಖ್ಯೆಯಲ್ಲಿ ಮುಸ್ಲ್ಲಿಂ ಸಮುದಾಯ ಧರ್ಮಗುರುಗಳು ಮತ್ತು ಮುಖಂಡರು ಭಾಗವಹಿಸಿದ್ದರು.
ವಿಶೇಷ ಅಂದ್ರೆ ಸ್ವತ: ಪೇಜಾವರ ಶ್ರೀಗಳೇ ಇಫ್ತಾರ್ ಕೂಟ ಆಯೋಜಿಸಿದರು. ಖರ್ಜೂರವನ್ನು ವಿತರಿಸಿ ಎಲ್ಲರೂ ಉಪವಾಸ ತೊರೆಯಲು ಅನುವು ಮಾಡಿಕೊಟ್ಟರು. ಬಳಿಕ ಅನ್ನಬ್ರಹ್ಮ ಛತ್ರದಲ್ಲಿ ಸಾಮೂಹಿಕ ನಮಾಜು ನಡೆಯಿತು. ಈ ವೇಳೆ ಮಾತನಾಡಿದ ಸ್ವಾಮೀಜಿ ನಮ: ಮತ್ತು ನಮಾಜು ಎರಡೂ ಒಂದೆ. ಇವು ಪ್ರಾರ್ಥನೆಗಿರುವ ಎರಡು ಪ್ರತ್ಯೇಕ ವಿಧಾನಗಳಷ್ಟೇ ಅಂದರು.
ಸಾಮೂಹಿಕ ಪ್ರಾರ್ಥನೆಯ ಬಳಿಕ ಎಲ್ಲರಿಗೂ ಉಪಹಾರ ಕೊಟ್ಟು ಸತ್ಕರಿಸಲಾಯ್ತು. ಪೇಜಾವರ ಸ್ವಾಮೀಜಿಗಳು ತೋರಿದ ಆತ್ಮೀಯತೆಗೆ ಬಂದವರೆಲ್ಲಾ ಮನಸೋತರು. ಎರಡೂ ಸಮುದಾಯದ ನಡುವಿನ ಬಾಂಧವ್ಯಕ್ಕೆ ಹೊಸ ಮುನ್ನುಡಿ ಬರೆದಂತಾಗಿದೆ ಎಂದು ಮುಸ್ಲೀಂ ಮುಖಂಡರು ಬಣ್ಣಿಸಿದರು.
ಕೃಷ್ಣಮಠದಲ್ಲಿ ಇದೇ ಮೊದಲಬಾರಿಗೆ ಸ್ವತಃ ಪೇಜಾವರ ಶ್ರೀಗಳು ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದು ವಿಶೇಷವಾಗಿತ್ತು. ಈ ಮೂಲಕ ಎಲ್ಲಾ ಧರ್ಮದವರು ಒಂದೇ ಅಂತಾ ಸಾರಿ ಹೇಳಿದ್ರು.