ನಲಪಾಡ್’ಗೆ ಜೈಲಾ? ಬೇಲಾ? ಇಂದು ನಿರ್ಧಾರವಾಗುತ್ತೆ ಭವಿಷ್ಯ
ಫರ್ಜಿ ಕೆಫೆಯಲ್ಲಿ ಗೂಂಡಾಗಿರಿ ನಡೆಸಿ ಜೈಲು ಸೇರಿರುವ ನಲಪಾಡ್ ಹ್ಯಾರಿಸ್ಗೆ ಇಂದು ನಿರ್ಣಾಯಕ ದಿನ. ಜಾಮೀನು ನೀಡಲು ನಿರಾಕರಿಸಿದ್ದ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಸಲ್ಲಿಸಿದ್ದ ಅರ್ಜಿಯ ಆದೇಶ ಇಂದು ಪ್ರಕಟವಾಗಲಿದೆ.
ಬೆಂಗಳೂರು (ಮಾ. 14): ಫರ್ಜಿ ಕೆಫೆಯಲ್ಲಿ ಗೂಂಡಾಗಿರಿ ನಡೆಸಿ ಜೈಲು ಸೇರಿರುವ ನಲಪಾಡ್ ಹ್ಯಾರಿಸ್ಗೆ ಇಂದು ನಿರ್ಣಾಯಕ ದಿನ. ಜಾಮೀನು ನೀಡಲು ನಿರಾಕರಿಸಿದ್ದ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಸಲ್ಲಿಸಿದ್ದ ಅರ್ಜಿಯ ಆದೇಶ ಇಂದು ಪ್ರಕಟವಾಗಲಿದೆ.
ನಲಪಾಡ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್, ನಲಪಾಡ್ ಹಲ್ಲೆ ನಡೆಸಿಲ್ಲ. ಗಲಾಟೆಯೂ ಕೂಡ ಉದ್ದೇಶಪೂರ್ವಕವಾಗಿ ನಡೆದಿಲ್ಲ. ತನಿಖೆ ಸಂಪೂರ್ಣವಾಗಿ ಮುಕ್ತಾಯವಾಗಿದ್ದು ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಎಸ್ಪಿಪಿ ಶ್ಯಾಮಸುಂದರ್ ವಾದ ಮಂಡಿಸಿ, ನಲಪಾಡ್ ಘನಘೋರವಾಗಿ ಹಲ್ಲೆ ನಡೆಸಿದ್ದಾನೆ. ಆರೋಪಿ ಪ್ರಭಾವಿಯಾಗಿದ್ದು, ಜಾಮೀನು ಸಿಕ್ಕರೆ ತನಿಖೆಗೆ ತೊಂದರೆಯಾಗುತ್ತದೆ. ಗಾಯಾಳು ವಿದ್ವತ್ ಕೂಡ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಜಾಮೀನು ನೀಡದಂತೆ ಮನವಿ ಮಾಡಿದ್ದಾರೆ. ವಾದ ಪ್ರತಿವಾದ ಆಲಿಸಿರುವ ನ್ಯಾಯಪೀಠ ಇಂದು ಮಧ್ಯಾಹ್ನ 2.30ಕ್ಕೆ ಆದೇಶ ಪ್ರಕಟಿಸಲಿದೆ. ಈಗಾಗಲೇ ನಲಪಾಡ್ 24 ದಿನಗಳ ಕಾಲ ಕಂಬಿ ಎಣಿಸಿದ್ದು, ಜಾಮೀನು ಸಿಗುತ್ತಾ..? ಅಥವಾ ಜೈಲು ವಾಸ ಮುಂದುವರೆಯುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ.