ಆಂಧ್ರ ಸಿಎಂ ದಿಲ್ಲಿ ಉಪವಾಸದಲ್ಲಿ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ
ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸೋಮವಾರ ದೆಹಲಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಈ ವೇಳೆ ಬಿಜೆಪಿ ವಿರೋಧಿ ಪಕ್ಷಗಳ ನಾಯಕರು ಆಂಧ್ರ ಭವನಕ್ಕೆ ತೆರಳಿ ನಾಯ್ಡುರವರಿಗೆ ಬೆಂಬಲ ಸೂಚಿಸಿದ್ದಾರೆ.
ನವದೆಹಲಿ[ಫೆ.12]: ಆಂಧ್ರಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕೆಂದು ಆಗ್ರಹಿಸಿ ಅಲ್ಲಿನ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸೋಮವಾರ ದೆಹಲಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು. ಈ ವೇಳೆ ಬಿಜೆಪಿ ವಿರೋಧಿ ಪಕ್ಷಗಳ ನಾಯಕರು ನಾಯ್ಡು ಉಪವಾಸ ಕುಳಿತಿದ್ದ ಆಂಧ್ರ ಭವನಕ್ಕೆ ತೆರಳಿ ಬೆಂಬಲ ಸೂಚಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.
ಮಾಜಿ ಪ್ರಧಾನಿ ಮನಮೋಹನ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಎನ್ಸಿ ಅಧ್ಯಕ್ಷ ಫಾರುಖ್ ಅಬ್ದುಲ್ಲಾ, ಎನ್ಸಿಪಿಯ ಮಜೀದ್ ಮೆಮನ್, ಟಿಎಂಸಿಯ ಡೆರೆಕ್ ಒ’ಬ್ರಿಯಾನ್, ಡಿಎಂಕೆಯ ತಿರುಚಿ ಸಿವ, ಲೋಕತಾಂತ್ರಿಕ ಜನತಾದಳದ ಶರದ್ ಯಾದವ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಮುಂತಾದವರು ನಾಯ್ಡು ಅವರನ್ನು ಭೇಟಿ ಮಾಡಿದರು.
ಈ ರಾರಯಲಿಯಲ್ಲಿ ಟಿಡಿಪಿ ಸಂಸದರು, ಸಚಿವರು, ಹಿರಿಯ ನಾಯಕರು, ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು. ಇವರನ್ನೆಲ್ಲಾ ಕರೆತರಲೆಂದೇ ಆಂಧ್ರ ಸರ್ಕಾರ 2 ರೈಲುಗಳನ್ನು ಪೂರ್ತಿಯಾಗಿ ಬುಕ್ ಮಾಡಿತ್ತು.
ಕಳೆದ ತಿಂಗಳು ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆಸಿದ್ದ ಸಮಾವೇಶಕ್ಕೂ ಇದೇ ರೀತಿ ಬಿಜೆಪಿವಿರೋಧಿ 22 ಪಕ್ಷಗಳ ನಾಯಕರು ತೆರಳಿ ಬೆಂಬಲ ಸೂಚಿಸಿದ್ದರು.