ಮೈಸೂರಿನ ಗೀತಾ, ಐಎಂಎಫ್‌ನ ಮುಖ್ಯ ಆರ್ಥಿಕ ಸಲಹೆಗಾರ್ತಿ | ಹಾಲಿ ಹಾರ್ವಡ್‌ ವಿವಿಯಲ್ಲಿ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಗೀತಾ, ಸಮಾಕಾಲೀನ ಜಾಗತಿಕ ಆರ್ಥಿಕ ತಜ್ಞರ ಪೈಕಿ ಮುಂಚೂಣಿಯಲ್ಲಿದ್ದಾರೆ.

ನವದೆಹಲಿ (ಅ. 02): ಮೈಸೂರಿನಲ್ಲಿ ಜನಿಸಿದ್ದ ಗೀತಾ ಗೋಪಿನಾಥ್‌ (46), ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ನ ನೂತನ ಮುಖ್ಯ ಆರ್ಥಿಕ ಸಲಹೆಗಾರ್ತಿಯಾಗಿ ನೇಮಕಗೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಭಾರತೀಯ ಮೂಲದ ರಘುರಾಂ ರಾಜನ್‌ ಬಳಿಕ ಈ ಪ್ರತಿಷ್ಠಿತ ಹುದ್ದೆ ಏರುತ್ತಿರುವ 2ನೇ ಭಾರತೀಯ ಮೂಲದ ವ್ಯಕ್ತಿ ಎಂಬ ಹಿರಿಮೆಗೆ ಗೀತಾ ಪಾತ್ರರಾಗಿದ್ದಾರೆ. ಹಾಲಿ ಹಾರ್ವಡ್‌ ವಿವಿಯಲ್ಲಿ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಗೀತಾ, ಸಮಾಕಾಲೀನ ಜಾಗತಿಕ ಆರ್ಥಿಕ ತಜ್ಞರ ಪೈಕಿ ಮುಂಚೂಣಿಯಲ್ಲಿದ್ದಾರೆ.

ಹಾರ್ವಡ್‌ ವಿವಿಯಲ್ಲಿ ಪ್ರೊಫೆಸರ್‌ ಹುದ್ದೆಗೆ ಏರಿದ ವಿಶ್ವದ ಮೂರನೇ ಮಹಿಳೆ ಮತ್ತು ನೊಬೆಲ್‌ ಪುರಸ್ಕೃತ ಭಾರತೀಯ ಅಮರ್ಥ್ಯ ಸೇನ್‌ ಬಳಿಕ ಇಂಥ ಹಿರಿಮೆ ಪಡೆದ ಏಕೈಕ ಭಾರತೀಯ ಸಂಜಾತೆ ಎಂಬ ಹಿರಿಮೆಯೂ ಇವರಿಗಿದೆ. ಜೊತೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೂ ಆರ್ಥಿಕ ಸಲಹೆಗಾರ್ತಿಯಾಗಿ ಸೇವೆ ನೀಡುತ್ತಿದ್ದಾರೆ.

ಗೀತಾ ಮುಕ್ತ ಆರ್ಥಿಕತೆಯ ಪ್ರತಿಪಾದಕರಾಗಿದ್ದಾರೆ. ಗೀತಾ ಅವರ ತಂದೆ ಗೋಪಿನಾಥ್‌ ಕೇರಳ ಮೂಲದವರಾದರೂ ಹಾಲಿ ಮೈಸೂರಿನಲ್ಲಿಯೇ ಕೃಷಿ ಮತ್ತು ಉದ್ಯಮ ನಡೆಸಿ ಅಲ್ಲೇ ವಾಸವಿದ್ದಾರೆ.