‘ನನಗೆ ಇಂಗ್ಲಿಷ್ ಅಷ್ಟಾಗಿ ಬರುವುದಿಲ್ಲ. ಈಗ ಕಲಿಯುತ್ತಿದ್ದೇನೆ.
ಮೈಸೂರು(ಅ.06): ‘ನನಗೆ ತಿಳಿದಷ್ಟು ಇಂಗ್ಲಿಷ್ ಮಾತನಾಡಿದ್ದರೂ, ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿ ನನ್ನ ಘನತೆಗೆ ಧಕ್ಕೆ ತಂದಿರುವವರ ವಿರುದ್ಧ ಅಪರಾಧ ಪತ್ತೆ ದಳಕ್ಕೆ ದೂರು ನೀಡುತ್ತೇನೆ’ ಎಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಎಂ.ಜೆ. ರವಿಕುಮಾರ್ ತಿಳಿಸಿದ್ದಾರೆ.
ಮೈಸೂರು ದಸರಾ ಸಂದರ್ಭದಲ್ಲಿ ಪ್ಯಾಲೇಸ್ ಆನ್ ವ್ಹೀಲ್ಸ್ಗೆ ಚಾಲನೆ ನೀಡುವ ಸಂದರ್ಭದಲ್ಲಿ ಖಾಸಗಿ ಇಂಗ್ಲಿಷ್ ಚಾನೆಲ್ ವರದಿಗಾರ್ತಿಯೊಂದಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡಿದ್ದನ್ನು ಯುಟ್ಯೂಬ್, ಫೇಸ್ಬುಕ್, ವಾಟ್ಸಆಪ್ಗೆ ಅಪ್ಲೋಡ್ ಮಾಡಿದವರ ಬಗ್ಗೆ ತನಿಖೆ ಮಾಡಿ ಮಾಹಿತಿ ಕೊಡುವಂತೆ ದೂರು ನೀಡುವುದಾಗಿ ಹೇಳಿದ್ದಾರೆ.
‘ನನಗೆ ಇಂಗ್ಲಿಷ್ ಅಷ್ಟಾಗಿ ಬರುವುದಿಲ್ಲ. ಈಗ ಕಲಿಯುತ್ತಿದ್ದೇನೆ. ಹೀಗಾಗಿ ಕನ್ನಡದಲ್ಲಿ ಸಂದೇಶ ನೀಡುತ್ತೇನೆ ಎಂದರೂ ಆ ವರದಿಗಾರ್ತಿ ಇಂಗ್ಲಿಷ್ ನಲ್ಲಿಯೇ ಮಾತನಾಡುವಂತೆ ಒತ್ತಡ ಹಾಕಿದ್ದರಿಂದ ನನಗೆ ತಿಳಿದಷ್ಟು ಮಾತನಾಡಿದೆ. ಅದನ್ನು ಆ ಖಾಸಗಿ ಚಾನೆಲ್ನವರು ಯುಟ್ಯೂಬ್ಗೆ ಅಪ್ಲೋಡ್ ಮಾಡಿದ್ದರು. ಅಲ್ಲಿಂದ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿ, ನನ್ನ ಘನತೆ, ಗೌರವವನ್ನು ಹಾಳು ಮಾಡುತ್ತಿರುವುದರಿಂದ ಸಿಸಿಬಿ ಪೊಲೀಸರನ್ನು ಸಂಪರ್ಕಿಸಿದ್ದೆ. ಅವರು ಲಿಖಿತವಾಗಿ ನೀಡಿದರೆ ಪರಿಶೀಲಿಸುವುದಾಗಿ ಹೇಳಿದ್ದಾರೆ’ ಎಂದಿದ್ದಾರೆ.
