ಮಕ್ಕಳ ಮಾರಾಟ ಜಾಲ: ಸಿಕ್ಕಿಬಿದ್ದ ಕಿಂಗ್'ಪಿನ್ ಲೇಡಿ ಡಾಕ್ಟರ್
ವಿಚಾರಣೆ ವೇಳೆ ತಾವು ನಂಜನಗೂಡಿನಲ್ಲಿ ಭಿಕ್ಷುಕಿ ಬಳಿ ಅಪಹರಿಸಿದ ಮಗುವನ್ನು ಬೆಂಗಳೂರಿನ ಡಾಕ್ಟರ್ ಒಬ್ಬರಿಗೆ ಒಂದೂವರೆ ಲಕ್ಷಕ್ಕೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಮೈಸೂರು(ನ. 04): ಅರಮನೆ ನಗರಿಯ ಜನತೆಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸ್. ಮಕ್ಕಳನ್ನು ಕದ್ದು ಮಾರಾಟ ಮಾರುವವರು ಮೈಸೂರಿನಲ್ಲೇ ಇರೋದು ದೃಢಪಟ್ಟಿದೆ. ಇಲ್ಲಿಯ ಮಂಡಿ ಮೊಹಲ್ಲಾದ ನಸೀಮ್ ನರ್ಸಿಂಗ್ ಹೋಮ್'ವೊಂದರ ಡಾಕ್ಟರ್ ಉಷಾ ಎನ್ನುವಾಕೆಯೇ ಮಕ್ಕಳನ್ನ ಕಳ್ಳತನ ಮಾಡಿಸಿ ಮಾರಾಟ ಮಾಡುವ ಕಿರಾತಕಿ. ಹಲವು ವರ್ಷಗಳ ಈಕೆಯ ದಂಧೆಯಲ್ಲಿ ಮೈಸೂರು, ನಂಜನಗೂಡು, ಮಂಡ್ಯ ಜಿಲ್ಲೆಗಳಲ್ಲಿ ಸುಮಾರು 18 ಹಸುಗೂಸುಗಳು ನಲುಗಿ ಹೋಗಿವೆ.
ಇದೇ ಏಪ್ರಿಲ್ 21ರಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಬಳಿ ಬಿಕ್ಷುಕಿಯೊಬ್ಬಳ ಬಳಿ ಮಲಗಿದ್ದ ಮೂರು ತಿಂಗಳ ಕಂದಮ್ಮನನ್ನ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದರು. ಮಗುವಿಗಾಗಿ ಆಕೆ ಚೀರಾಡಿದಾಗ ಕೆಲವರು ದುಷ್ಕರ್ಮಿಗಳನ್ನ ಚೇಸ್ ಮಾಡುವ ಪ್ರಯತ್ನ ಮಾಡಿದ್ರೂ ಪ್ರಯೋಜನ ಆಗಲಿಲ್ಲ. ಕೇಸ್ ಬುಕ್ ಮಾಡಿಕೊಂಡಿದ್ದ ನಂಜನಗೂಡು ಪೊಲೀಸರು, ಪಾತಾಳ ಗರಡಿ ಹಿಡಿದು ಫೀಲ್ಡಿಗೆ ಎಂಟ್ರಿ ಕೊಟ್ಟರು. ಆಗಲೇ ಇಡೀ ಮೈಸೂರೇ ಶೇಕ್ ಆಗುವಂತಹ ಸ್ಫೋಟಕ ವಿಚಾರ ಬಯಲಿಗೆ ಬಂದಿರೋದು.
ನಂಜನಗೂಡು ಕೇಸ್ ಸಂಬಂಧ ಮಹೇಶ್, ಮೋಹನ್, ರೇಖಾ ಅವರನ್ನ ಪೊಲೀಸರು ಬಂಧಿಸಿ ಕೋರ್ಟ್'ಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕೊಟ್ಟ ಮಾಹಿತಿ ಮೇರೆಗೆ ಡಾಕ್ಟರ್ ಉಷಾ ಪಾತ್ರ ಸಾಬೀತಾಗಿದ್ದು ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ. ಶ್ರೀಮಂತರಿಗೆ ಮಕ್ಕಳನ್ನು ಮಾರಲು ಬಡ, ನಿರ್ಗತಿಕ, ಭಿಕ್ಷುಕ ಕುಟುಂಬಗಳನ್ನ ಟಾರ್ಗೆಟ್ ಮಾಡುತ್ತಿದ್ದ ವಿಚಾರವನ್ನ ತನಿಖೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ವಿಚಾರಣೆ ವೇಳೆ ತಾವು ನಂಜನಗೂಡಿನಲ್ಲಿ ಭಿಕ್ಷುಕಿ ಬಳಿ ಅಪಹರಿಸಿದ ಮಗುವನ್ನು ಬೆಂಗಳೂರಿನ ಡಾಕ್ಟರ್ ಒಬ್ಬರಿಗೆ ಒಂದೂವರೆ ಲಕ್ಷಕ್ಕೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ಜಾಲದ ಹಿಂದೆ ಪ್ರಭಾವಿಗಳ ಪಾತ್ರದ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಮೈಸೂರಿನ ಅನಾಥ, ಭಿಕ್ಷುಕ ಕುಟುಂಬದ ಮಕ್ಕಳನ್ನು ಕದ್ದೊಯ್ಯುವ ಭಯಾನಕ ಜಾಲ ಬಯಲಾಗಿದೆ. ಆದ್ರೆ ಅದೆಷ್ಟು ಮಕ್ಕಳನ್ನು ಮಾರಾಟ ಮಾಡಿದ್ದಾರೆ ಅನ್ನೋದನ್ನ ಮೈಸೂರು ಪೊಲೀಸ್ರು ಪ್ರಾಮಾಣಿಕವಾಗಿ ಬಯಲಿಗೆ ತರಬೇಕಿದೆ.
- ಮಧು ಎಂ. ಚಿನಕುರಳಿ, ಮೈಸೂರು
(ಫೋಟೋದಲ್ಲಿರುವುದು ಮೈಸೂರು ಎಸ್'ಪಿ ರವಿ ಚನ್ನಣ್ಣನವರ್)