ಮಕ್ಕಳನ್ನು ಹುಟ್ಟಿಸೋದ್ರಲ್ಲಿ ಭಾರತ ನಂ.1. ಇದಕ್ಕಾಗಿ ಅದು ಪ್ರಪಂಚದಲ್ಲಿಯೇ ಪ್ರಥಮ ಬಹುಮಾನ ಪಡೆಯುವಂತಿದೆ ಎಂದು ಮಾಜಿ ಸಚಿವ ಎಚ್‌. ಆಂಜನೇಯ, ದೇಶದ ಜನಸಂಖ್ಯೆ ಹೆಚ್ಚಳದ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ಕೊಪ್ಪಳ: ಮಕ್ಕಳನ್ನು ಹುಟ್ಟಿಸೋದ್ರಲ್ಲಿ ಭಾರತ ನಂ.1. ಇದಕ್ಕಾಗಿ ಅದು ಪ್ರಪಂಚದಲ್ಲಿಯೇ ಪ್ರಥಮ ಬಹುಮಾನ ಪಡೆಯುವಂತಿದೆ ಎಂದು ಮಾಜಿ ಸಚಿವ ಎಚ್‌. ಆಂಜನೇಯ, ದೇಶದ ಜನಸಂಖ್ಯೆ ಹೆಚ್ಚಳದ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ಕುಷ್ಟಗಿಯಲ್ಲಿ ದೇವದಾಸಿ ತಾಯಂದಿರ ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಂಖ್ಯೆಯನ್ನು ನಿಯಂತ್ರಣ ಮಾಡುವಂತೆ ಕರೆ ನೀಡಿದರು. ನನಗೆ ಇರುವುದು ಇಬ್ಬರು ಹೆಣ್ಣು ಮಕ್ಕಳು ಮಾತ್ರ. ಗಂಡು ಮಗು ಬೇಕೆಂದು ಮನೆಯಲ್ಲಿ ಗಲಾಟೆ ಮಾಡಿದರೂ ಒಪ್ಪಲಿಲ್ಲ. ಹೆಣ್ಣಾದರೇನಂತೆ ಎಂದು ಎರಡಕ್ಕೇ ನಿಲ್ಲಿಸಿದೆ ಎಂದರು.

ಒಂದೇ ಮಗು ಸಾಕು ಎಂದಿದ್ದೆ. ಆದರೆ, ಗಂಡಾಗುತ್ತದೆ ಎಂದು ಮತ್ತೊಂದು ಹೆಣ್ಣೇ ಆಯಿತು. ನಂತರ ನಾನು ಯಾರ ಮಾತೂ ಕೇಳಲಿಲ್ಲ. ನೀವು ಸಹ ಒಂದು, ಅಬ್ಬಬ್ಬಾ ಎಂದರೆ ಎರಡು ಮಕ್ಕಳನ್ನು ಮಾತ್ರ ಹಡೆಯಿರಿ ಎಂದರು.

ಅತಿಯಾದ ದೇವರ ಮೇಲಿನ ಭಕ್ತಿಯಿಂದ ಹಾಳಾಗಿ ಹೋಗ್ತಿರಾ, ದೇವರ ಮೇಲೆ ಭಕ್ತಿ ಎಷ್ಟಿರಬೇಕು ಅಷ್ಟಿರಬೇಕು. ಅದು ಬಿಟ್ಟು ದ್ಯಾಮವ್ವ, ದುರಗವ್ವ ಜಾತ್ರೆಯನ್ನು ವಾರಗಟ್ಟಲೇ ಮಾಡುತ್ತೀರಾ? ಕುರಿಕೋಳಿ ಕೊಯ್ದು ತಿನ್ನುತ್ತಿರಾ, ಸಾಲ ಮಾಡಿಯಾದರೂ ವಾರಗಟ್ಟಲೇ ಜಾತ್ರೆ ಮಾಡುತ್ತೀರಿ. ಆದರೆ, ಬೇರೆಯವರು ಹೋಳಿಗೆ ಊಟ ಮಾಡಿ ಆರಾಮ ಆಗಿರುತ್ತಾರೆ. ಆದರಿಂದ ದೇವರ ಮೇಲೆ ಭಕ್ತಿ ಇರಲಿ. ಅದು ಅತಿಯಾಗಿ ಬೇಡ. ನಿಮ್ಮ ಮಕ್ಕಳನ್ನು ಹೆಚ್ಚೆಚ್ಚು ಓದಿಸಿ, ಪತ್ರಕರ್ತರು, ಶಿಕ್ಷಕರು, ಡೀಸಿ ಮಾಡಿ. ಜಾತ್ರೆ ಬದಲಿಗೆ ಇಂಥದ್ದಕ್ಕೆ ಖರ್ಚು ಮಾಡಿ ಎಂದು ಹೇಳಿದರು.