ದೇವಸ್ಥಾನಕ್ಕೆ ಭೇಟಿ ನೀಡಿ, ಮನೆಗೆ ಮರಳುವಾಗ ಈ ಸಂಗೀತಗಾರರ ಕಾರು ಮರವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಮದುವೆಯಾಗಿ 15 ವರ್ಷಗಳ ನಂತರ ಜನಿಸಿದ ಎರಡು ವರ್ಷದ ಮಗಳು ಅಸು ನೀಗಿದ್ದಳು. ಇದೀಗ ಚಿಕಿತ್ಸೆ ಫಲಿಸದೇ ಇವರೂ ಅಸುನೀಗಿದ್ದಾರೆ.

ತಿರುವನಂತಪುರಂ(ಅ.2): ಒಂದು ವಾರದ ಹಿಂದೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಕೇರಳದ ಪ್ರಖ್ಯಾತ ಸಂಗೀತಗಾರ, ವೈಯಲಿನ್ ವಾದಕ ಬಾಲಭಾಸ್ಕರ್ (40) ಕೊನೆಯುಸಿರೆಳೆದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪತ್ನಿ ಹಾಗೂ ಎರಡು ವರ್ಷದ ಮಗಳೊಂದಿಗೆ ತ್ರಿಸೂರಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಭಾಸ್ಕರ್, ತಿರುವನಂತಪುರಕ್ಕೆ ಮರಳುತ್ತಿದ್ದರು. ಆಗ ಮರವೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಭಾಸ್ಕರ್ ಅವರ ಎರಡು ವರ್ಷದ ಮಗಳು ತೇಜಸ್ವಿನಿ ಮೃತಪಟ್ಟಿದ್ದಳು. ಮದುವೆಯಾಗಿ ಕಾಲಿರಿಸಿದ 15 ವರ್ಷಗಳ ನಂತರ ಮಗಳು ತೇಜಸ್ವಿನಿ ಜನಿಸಿದ್ದಳು.

ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಾಲಕ, ಪತ್ನಿ ಹಾಗೂ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಾರದ ಚಿಕಿತ್ಸೆ ನಂತರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಪತ್ನಿ ಲಕ್ಷ್ಮಿ ಹಾಗೂ ಡ್ರೈವರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಯಾರೀ ಬಾಲ ಭಾಸ್ಕರ್?
ಕೇವಲ 17 ವರ್ಷದವರಾಗಿದ್ದಾಗಲೇ ಮಲಯಾಳಂ ಚಿತ್ರಕ್ಕೆ ಸಂಗೀತ ಸಂಯೋಜಿಸಿ ಖ್ಯಾತರಾದ ಸಂಗೀತಗಾರ ಇವರು. ಆಗಿನಿಂದಲೂ ಅನೇಕ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕೇರಳ ಹೊರತು ಪಡಿಸಿ, ಎಲ್ಲೆಡೆ ಸಂಗೀತ ಕಛೇರಿಗಳನ್ನು ನೀಡಿ, ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಇವರ ಅಂತಿಮ ಸಂಸ್ಕಾರ ಇಂದು ಸಂಜೆ ತಿರುವನಂತಪುರದಲ್ಲಿ ನಡೆಯಲಿದೆ. ಅಭಿಮಾನಿಗಳು, ವಿದ್ಯಾರ್ಥಿಗಳ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.