ನೋಟು ನಿಷೇಧ ಸಾವುಗಳಿಗೆ ಮೋದಿ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಬೇಕು: ಸಂಜಯ್ ನಿರುಪಮ್
ಈ ಎಲ್ಲಾ ಸಾವಿಗೂ ಒಬ್ಬರೇ ಕಾರಣವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಐಪಿಸಿ ಸೆಕ್ಷನ್ 302 ಪ್ರಕಾರ ಹತ್ಯೆ ಪ್ರಕರಣ ದಾಖಲಿಸಬೇಕು ಎಂದು ಸಂಜಯ್ ನಿರುಪಮ್ ತಿಳಿಸಿದ್ದಾರೆ.
ಮುಂಬೈ (ನ.22): ನೋಟುಗಳನ್ನು ಬದಲಿಸಿಕೊಳ್ಳಲು ಬ್ಯಾಂಕ್’ನಲ್ಲಿ ಕ್ಯೂ ನಿಂತಿದ್ದ ವೇಳೆ 70 ಜನರು ಮೃತಪಟ್ಟಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಣೆಗಾರರನ್ನಾಗಿ ಮಾಡಿರುವ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್, ಪ್ರಧಾನಿ ಅವರ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
500, 1000 ರೂ. ನೋಟುಗಳ ನಿಷೇಧದಿಂದ ಸಾವಿರಾರು ಜನರು ಇಂದು ಆಹಾರ, ಔಷಧಗಳನ್ನು ಕೊಳ್ಳಲು ಸಾಧ್ಯವಗದೇ ಬೀದಿಯಲ್ಲಿ ನಿಂತಿದ್ದಾರೆ. ಹಲವು ದಿನಗಳ ವರೆಗೆ ಜನರು ಕ್ಯೂ ನಿಂತುಕೊಂಡಿದ್ದು ಈ ಪೈಕಿ ಒಟ್ಟು 70 ಜನರು ಮೃತಪಟ್ಟಿದ್ದಾರೆ ಎಂದು ನಿರುಪಮ್ ಹೇಳಿದ್ದಾರೆ.
ಈ ಎಲ್ಲಾ ಸಾವಿಗೂ ಒಬ್ಬರೇ ಕಾರಣವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಐಪಿಸಿ ಸೆಕ್ಷನ್ 302 ಪ್ರಕಾರ ಹತ್ಯೆ ಪ್ರಕರಣ ದಾಖಲಿಸಬೇಕು ಎಂದು ಸಂಜಯ್ ನಿರುಪಮ್ ತಿಳಿಸಿದ್ದಾರೆ.
ಮುಂಬೈ ಕಾಂಗ್ರೆಸ್ ನ ಮುಖ್ಯಸ್ಥರಾಗಿರುವ ಸಂಜಯ್ ನಿರುಪಮ್ ನೋಟ್ ಪೇ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ವೇಳೆ ಈ ಹೇಳಿಕೆ ನೀಡಿದ್ದು, ಈ ವರೆಗೂ 5 ಲಕ್ಷ ಕೋಟಿ ರೂ. ಮೊತ್ತದ ಹಳೆಯ ನೋಟುಗಳು ಬ್ಯಾಂಕ್’ಗಳಲ್ಲಿ ಜಮಾ ಆಗಿದೆ, ಆದರೆ ಜಮಾ ಆಗಿರುವ ಹಣದ ಮೊತ್ತದಲ್ಲಿ ಶೇ.25 ರಷ್ಟನ್ನು ಮಾತ್ರ ವಿತ್ ಡ್ರಾ ಮಾಡಲು ಸಾಧ್ಯವಾಗಿದ್ದು ಜನರು ಗಾಬರಿಯಾಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ.