ಮುಂಬೈನ ಸಾರ್ವಜನಿಕ ಗಣೇಶೋತ್ಸವಕ್ಕೆ 125 ವರ್ಷ
ಬಾಲಗಂಗಾಧರ ತಿಲಕರು 1894ರಲ್ಲಿ ಮೊತ್ತಮೊದಲ ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ್ದರು.ಆಗ ಒಂದು ಭಾಗದಲ್ಲಿ ಆರಂಭವಾಗಿದ್ದ ಸಾರ್ವಜನಿಕ ಗಣೇಶೋತ್ಸವ ಇಂದು 11 ಸಾವಿರ ಗಣೇಶ ಮಂಡಳಗಳಲ್ಲಿ ನಡೆಯುತ್ತಿದೆ.
ಮುಂಬೈ(ಆ.21): ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರನ್ನು ಒಂದೆಡೆ ಸೇರಿಸಿ ಉತ್ತೇಜನ ನೀಡಲೆಂದು ಸಾರ್ವಜನಿಕ ಗಣೇಶೋತ್ಸವವನ್ನು ಬಾಲ ಗಂಗಾಧರ ತಿಲಕರು ಆರಂಭಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ. ಈ ಐತಿಹಾಸಿಕ ಸಾರ್ವಜನಿಕ ಗಣೇಶೋತ್ಸವಕ್ಕೆ 125 ವರ್ಷ ತುಂಬಲಿದೆ.
ಈ ಸಲದ ಗಣೇಶೋತ್ಸವ ಆಗಸ್ಟ್ 25ರಿಂದ ಸೆಪ್ಟೆಂಬರ್ 5ರವರೆಗೆ ಮುಂಬೈನಲ್ಲಿ ನೆರವೇರಲಿದೆ. ಇದೇ ಮುಂಬೈನ ಗಿರಗಾಂವ್'ನಲ್ಲಿರುವ ಖಾಡಿಲ್ಕರ್ ರಸ್ತೆಯ ಕೇಶವಜಿ ನಾಯಕ್ ಚಾಳ್'ನಲ್ಲಿ ಬಾಲಗಂಗಾಧರ ತಿಲಕರು 1894ರಲ್ಲಿ ಮೊತ್ತಮೊದಲ ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ್ದರು.ಆಗ ಒಂದು ಭಾಗದಲ್ಲಿ ಆರಂಭವಾಗಿದ್ದ ಸಾರ್ವಜನಿಕ ಗಣೇಶೋತ್ಸವ ಇಂದು 11 ಸಾವಿರ ಗಣೇಶ ಮಂಡಳಗಳಲ್ಲಿ ನಡೆಯುತ್ತಿದೆ.
ಈ ಉತ್ಸವದ ಒಟ್ಟಾರೆ ಮೌಲ್ಯ 1,000 ಕೋಟಿ ರು.ನಿಂದ 1,200 ಕೋಟಿ ರು. ಮೌಲ್ಯದ್ದಾಗಲಿದೆ. ಈ ಶುಭ ಸಂದರ್ಭದಲ್ಲಿ ಬೃಹನ್ಮುಂಬೈ ಸಾರ್ವಜನಿಕ ಗಣೇಶೋತ್ಸವ ಸಮನ್ವಯ ಸಮಿತಿಯು 125ನೇ ಸಾರ್ವಜನಿಕ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.