ಮೊದಲೇ ಎಚ್ಚೆತ್ತಿದ್ರೆ ಇನ್ನೂ 10 ಟಿಎಂಸಿ ಸಿಗ್ತಿತ್ತು: ರಾಜೀವ್ ಚಂದ್ರಶೇಖರ್
ಸಿದ್ದರಾಮಯ್ಯ ಅವರ ಸರ್ಕಾರ ಕಾವೇರಿ ವಿಚಾರದಲ್ಲಿ ಮೊದಲೇ ಸೂಕ್ತ ಕಾನೂನು ಹೋರಾಟ ನಡೆಸಿದ್ದರೆ ರಾಜ್ಯಕ್ಕೆ ಇನ್ನೂ 10 ಟಿಎಂಸಿ ನೀರು ಹೆಚ್ಚುವರಿಯಾಗಿ ಲಭಿಸುತ್ತಿತ್ತು ಎಂದು ರಾಜ್ಯಸಭಾ ಸದಸ್ಯ
ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಬೆಂಗಳೂರು (ಫೆ. 17): ಸಿದ್ದರಾಮಯ್ಯ ಅವರ ಸರ್ಕಾರ ಕಾವೇರಿ ವಿಚಾರದಲ್ಲಿ ಮೊದಲೇ ಸೂಕ್ತ ಕಾನೂನು ಹೋರಾಟ ನಡೆಸಿದ್ದರೆ ರಾಜ್ಯಕ್ಕೆ ಇನ್ನೂ 10 ಟಿಎಂಸಿ ನೀರು ಹೆಚ್ಚುವರಿಯಾಗಿ ಲಭಿಸುತ್ತಿತ್ತು ಎಂದು ರಾಜ್ಯಸಭಾ ಸದಸ್ಯ
ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರದ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕಾವೇರಿ ನೀರಿನ ಮೇಲೆ ತಮಿಳುನಾಡು ರಾಜ್ಯಕ್ಕಿಂತ ಕರ್ನಾಟಕದ ಜನತೆ ಹೆಚ್ಚು ಅವಲಂಬಿತರಾಗಿದ್ದೇವೆ. ಕಾವೇರಿ ನೀರು ವಿಚಾರದಲ್ಲಿ
ಸಿದ್ದರಾಮಯ್ಯ ಅವರು ಈ ಹಿಂದೆ ಸೂಕ್ತವಾಗಿ ಕಾನೂನು ಹೋರಾಟ ರೂಪಿಸದ ಹಿನ್ನೆಲೆಯಲ್ಲಿ ನಾನು ಸೇರಿ ಎಲ್ಲರೂ ಟೀಕೆ ಮಾಡಿದ್ದೆವು. ಆದರೆ ಕಾನೂನು ಸಮರದಲ್ಲಿ ಯೋಜಿತ ಹೋರಾಟ ನಡೆಸಿದ್ದರೆ, 14.75 ಟಿಎಂಸಿ ಜತೆಗೆ ಹೆಚ್ಚುವರಿಯಾಗಿ ಇನ್ನೂ 10 ಟಿಎಂಸಿ ನೀರು ರಾಜ್ಯಕ್ಕೆ ಸಿಗುತ್ತಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಡಳಿತ ವರ್ಗ ಸೂಕ್ತವಾಗಿ ನಿರ್ವಹಣೆ ಮಾಡದ ಕಾರಣ ಇಂದು ಜಲ ಮೂಲಗಳು ಬತ್ತುವ ಸ್ಥಿತಿ ತಲುಪಿವೆ. ನೀರು ಇದೀಗ ಹೆಚ್ಚು ಸೀಮಿತವಾದ ಸಂಪನ್ಮೂಲವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಜಲ ಸಂಪನ್ಮೂಲವನ್ನು ರಕ್ಷಿಸಿ, ನಿರ್ವಹಣೆ ಮಾಡಬೇಕಿದ್ದು, ಈ ಮೂಲಕ ಜಲ ಸಂಪನ್ಮೂಲವನ್ನು ಹೆಚ್ಚಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.