ಕ್ಷೇತ್ರ ಭೇಟಿ ವೇಳೆ ಸಂಸದನ ಜನಪರ ಕಾಯಕ

ಭೋಪಾಲ್‌: ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್‌ ಚೌಹಾಣ್‌, ಈ ಹಿಂದೆ ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿದ್ದಾಗ ಕಾಲು ಕೆಸರಾಗುತ್ತದೆ ಎಂದು ಅಧಿಕಾರಿಗಳ ಹೆಗಲ್ಲೇನ್ನೇರಿ ಹೋಗಿ ವಿವಾದಕ್ಕೆ ಕಾರಣರಾಗಿದ್ದರು. ಆದರೆ ಇದೀಗ ಅವರದ್ದೇ ರಾಜ್ಯದ ಬಿಜೆಪಿ ಸಂಸದರು, ಶೌಚಾಲಯವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಬರಿಗೈಯಲ್ಲೇ ಶೌಚ ಗುಂಡಿಗೆ ಹಾಕಿ ಶುಚಿಗೊಳಿಸಿದ ಅಚ್ಚರಿಯ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

ರೇವಾ ಜಿಲ್ಲೆಯ ಸಂಸದ ಜನಾರ್ಧನ್‌ ಮಿಶ್ರಾ, ಖಜುವಾ ಗ್ರಾಮದ ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ಶಾಲೆಯಲ್ಲಿರುವ ಶೌಚಾಲಯ ಕಟ್ಟಿಕೊಂಡಿದ್ದು, ಮಕ್ಕಳು ಶೌಚಾಲಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ವಿಷಯ ಅರಿತುಕೊಂಡರು. ಈ ವೇಳೆ ಅಂಗಿಯ ತೋಳುಗಳನ್ನು ಮೇಲಕ್ಕೇರಿಸಿಕೊಂಡ ಸಂಸದ ಜನಾರ್ಧನ್‌, ಬರಿಗೈಯಲ್ಲೇ ಭಾರತೀಯ ಶೈಲಿಯಲ್ಲಿರುವ ಶೌಚಾಲಯದಲ್ಲಿ ಕಟ್ಟಿಕೊಂಡಿದ್ದ ಮಣ್ಣನ್ನು ಹೊರ ತೆಗೆದು ಹಾಕಿದ್ದಾರೆ.

ಈ ನಡುವೆ, ವ್ಯಕ್ತಿಯೋರ್ವ ಸಂಸದ ಮಿಶ್ರಾ ಅವರಿಗೆ ಶೌಚಾಲಯ ಶುಚಿ ಕೆಲಸವನ್ನು ತಾನೇ ಮಾಡುವುದಾಗಿ ವಿನಂತಿಸಿಕೊಳ್ಳುತ್ತಾನೆ. ಆದರೆ, ಕೆಲಸಗಾರನ ಮಾತನ್ನು ಕಿವಿಗೆ ಹಾಕಿಕೊಳ್ಳದ ಮಿಶ್ರಾ, ಶೌಚಾಲಯದಲ್ಲಿ ಕಟ್ಟಿಕೊಂಡಿದ್ದ ಮಣ್ಣನ್ನು ಹೊರತೆಗೆದು ಹಾಕಿ, ಶೌಚಾಲಯ ಸಂಪೂರ್ಣ ದುರಸ್ತಿಯಾಗಿದೆಯೇ ಎಂಬುದರ ಬಗ್ಗೆ ತಾವೇ ಖುದ್ದಾಗಿ ನೀರು ಹಾಕಿ ಪರಿಶೀಲಿಸುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.