ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿದ ವೃದ್ಧ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ಯಾರ ನೆರವೂ ಸಿಗದೆ ಆಕೆಯ ಪುತ್ರ ಸುಮಾರು 45 ನಿಮಿಷ ಪರದಾಡಿದ ಘಟನೆ ನಗರದ ರಿಂಗ್‌ ರಸ್ತೆಯ ಉದನೂರು ಕ್ರಾಸ್‌ ಬಳಿ ಗುರುವಾರ ನಡೆದಿದೆ.
ವೃದ್ಧೆ ಸಿದ್ದಮ್ಮ ಮಂದೇವಾಲ್(85) ರಕ್ತ ಸ್ರಾವದಿಂದ ಹಿಂಸೆ ಅನುಭವಿಸಿದ ಗಾಯಾಳು. ಬಳಿಕ ಪೊಲೀಸರೇ ಎಸ್ಕಾರ್ಟ್ ವಾಹನದಲ್ಲಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು, ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ವೃದ್ಧೆಯ ತಲೆಗೆ ತೀವ್ರ ಪೆಟ್ಟಾಗಿದ್ದು, ಇನ್ನೂ ರಕ್ತಸ್ರಾವ ನಿಂತಿಲ್ಲ. ಅವರ ದೇಹಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ರಿಂಗ್ ರಸ್ತೆಯಲ್ಲೇ ವೃದ್ಧೆ ಸಿದ್ದಮ್ಮ ಅವರ ಮಕ್ಕಳ ಹೋಟೆಲ್ ಇದ್ದು, ಅವರನ್ನು ನೋಡಲೆಂದು ಸಿದ್ದಮ್ಮ ಬಂದಿದ್ದರು. ಈ ವೇಳೆ ರಸ್ತೆ ದಾಟುವಾಗ ವೇಗವಾಗಿ ಬಂದ ಬೈಕ್ ಸವಾರ ವೃದ್ಧೆಗೆ ಡಿಕ್ಕಿ ಹೊಡೆದಿದ್ದು, ಸುಮಾರು ಮೂರ್ನಾಲ್ಕು ಮೀಟರ್ವರೆಗೆ ಬೈಕ್ ಅವರನ್ನು ಎಳೆದೊಯ್ದು ನೆಲಕ್ಕೆ ಅಪ್ಪಳಿಸಿದೆ. ಘಟನೆಯಲ್ಲಿ ವೃದ್ಧೆ ಯ ತಲೆಗೆ ತೀವ್ರ ಪೆಟ್ಟಾಗಿದ್ದು, ಪ್ರಜ್ಞೆ ತಪ್ಪಿದಾಗ ಈ ಘಟನೆ ನಡೆದಿದೆ.
