ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಿಮೆಯಾದ ಮುಂಗಾರು
- ಜುಲೈ ಪ್ರಥಮ ವಾರ ಬಂದರೂ ಮುಂಗಾರು ಮಳೆಯ ಪ್ರಮಾಣದಲ್ಲಿ ಗಮನಾರ್ಹ ಏರಿಕೆಯಾಗಿಲ್ಲ
- ಹವಾಮಾನ ಇಲಾಖೆಯ ಪ್ರಕಾರ, ಜು.15ರವರೆಗೆ ಧಾರಾಕಾರ ಮಳೆಯಾಗುವ ಸಂಭವ
ಮಂಗಳೂರು(ಜು.13): ದ.ಕ.ಜಿಲ್ಲೆಯಲ್ಲಿ ಮುಂಗಾರು ಮಳೆ ಗುರುವಾರ ಕಡಿಮೆಯಾಗಿದೆ. ಬುಧವಾರ ರಾತ್ರಿ ಒಂದಷ್ಟು ಮಳೆ ಸುರಿದಿದೆ.
ಗುರುವಾರ ಮುಂಜಾನೆ ಧಾರಾಕಾರ ಮಳೆಯಾಗಿದೆ. ಆದರೆ ಹಗಲು ಹೊತ್ತಿನಲ್ಲಿ ಅಷ್ಟಾಗಿ ಮಳೆ ಬಂದಿಲ್ಲ. ಮಧ್ಯಾಹ್ನ ಬಿಸಿಲು ಇಣುಕಿದ್ದು ಬಿಟ್ಟರೆ ಬಾಕಿ ಹೊತ್ತಿನಲ್ಲಿ ತುಂತುರು ಮಳೆ ಬಂದಿದೆ. ಹವಾಮಾನ ಇಲಾಖೆಯ ಪ್ರಕಾರ, ಜು.15ರವರೆಗೆ ಕರಾವಳಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.
ಜುಲೈ ಪ್ರಥಮ ವಾರ ಬಂದರೂ ಮುಂಗಾರು ಮಳೆಯ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಕೇಂದ್ರ ವಿಪತ್ತ ಸ್ಪಂದನಾ ತಂಡ ಜಿಲ್ಲೆಯಲ್ಲಿ ಬೀಡುಬಿಟ್ಟಿದೆ.
ಬೆಳ್ತಂಗಡಿಯಲ್ಲಿ ಗರಿಷ್ಠ ಮಳೆ
ಗುರುವಾರ ಬೆಳಗ್ಗಿನವರೆಗೆ ಜಿಲ್ಲೆಯ ಬೆಳ್ತಂಗಡಿಯಲ್ಲಿ ಗರಿಷ್ಠ 68.6 ಮಿಲಿ ಮೀಟರ್ ಮಳೆ ದಾಖಲಾಗಿದೆ. ಬಂಟ್ವಾಳ 40.5 ಮಿ.ಮೀ, ಬೆಳ್ತಂಗಡಿ 68.6 ಮಿ.ಮೀ, ಮಂಗಳೂರು 28.2 ಮಿ.ಮೀ, ಪುತ್ತೂರು 53.3 ಮಿ.ಮೀ ಹಾಗೂ ಸುಳ್ಯದಲ್ಲಿ 63.3 ಮಿ.ಮೀ. ಮಳೆ ವರದಿಯಾಗಿದೆ. ದಿನದ ಒಟ್ಟು ಮಳೆ 50.8 ಮಿ.ಮೀ. ಆಗಿದ್ದು, ಕಳೆದ ಅವಧಿಯಲ್ಲಿ 11.3 ಮಿ.ಮೀ. ಕಡಿಮೆ ಮಳೆಯಾಗಿತ್ತು. ಜುಲೈನಲ್ಲಿ ಇದುವರೆಗೆ 541.3 ಮಿ.ಮೀ. ಮಳೆಯಾಗಿದ್ದು, ಕಳೆದ ಬಾರಿ 295 ಮಿ.ಮೀ. ಕಡಿಮೆ ಮಳೆ ದಾಖಲಾಗಿತ್ತು.
ಜನವರಿಯಿಂದ ಈವರೆಗೆ 2,265 ಮಿ.ಮೀ. ಮಳೆಯಾಗಿದ್ದು, 1,335.2 ಮಿ.ಮೀ. ಮಳೆ ವರದಿಯಾಗಿತ್ತು. ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರಾ
ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿಲ್ಲ. ಕಳೆದ ಮೂರು ದಿನಗಳಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿಲ್ಲ. ಆದ್ದರಿಂದ ನದಿ ನೀರಿನ ಮಟ್ಟದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.