ಚೆನ್ನೈ ನಗರವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಇದರಿಂದ ಬೇರೆ ಜಿಲ್ಲೆಗಳಿಂದ  ರೈಲಿನಲ್ಲಿ ನೀರು ತರಿಸಿಕೊಳ್ಳಲಾಗುತ್ತಿದೆ.

ಚೆನ್ನೈ[ಜೂ.21] : ಬೇಸಿಗೆ ತಾಪಮಾನ ಹಾಗೂ ಮಳೆ ಕೊರತೆಯಿಂದ ತತ್ತರಿಸಿರುವ ಚೆನ್ನೈಗೆ ಇದೀಗ ನೀರಿನ ಗಂಡಾಂತರ ಎದುರಾಗಿದೆ. ನೀರಿನ ತೀವ್ರ ಸಮಸ್ಯೆಗೆ ಪರಿಹಾರಕ್ಕಾಗಿ ವಿಪಕ್ಷಗಳ ತೀವ್ರ ತರಾಟೆ ಬೆನ್ನಲ್ಲೇ ತಮಿಳುನಾಡು ಸರ್ಕಾರ ಬೇರೆ ಜಿಲ್ಲೆಗಳಿಂದ ರೈಲಿನ ಮೂಲಕ ರಾಜಧಾನಿ ಚೆನ್ನೈಗೆ ನೀರು ತರಿಸಲು ಮುಂದಾಗಿದೆ.

Add Asianetnews Kannada as a Preferred SourcegooglePreferred

ಕೃಷಿಗೆ ಬಳಕೆ ಮಾಡುವ ನೀರನ್ನು ಬೇರೆ ಜಿಲ್ಲೆಗಳಿಂದ ರೈಲು ಟ್ಯಾಂಕರ್‌ ಮೂಲಕ ತರಿಸಿ ಹಂಚಿಕೆ ಮಾಡಲು ಎಐಎಡಿಎಂಕೆ ಸರ್ಕಾರ ಮುಂದಾಗಿದೆ. ಈ ನೀರನ್ನು ತರಿಸದೇ ಹೋದಲ್ಲಿ ತ.ನಾಡಿನ ರಾಜಧಾನಿ ಚೆನ್ನೈನ ಸ್ಥಿತಿ ಮತ್ತಷ್ಟುಹದಗೆಡುವ ಹಂತಕ್ಕೆ ತಲುಪಿದೆ. ಚೆನ್ನೈಗೆ ಪ್ರತಿ ದಿನ 800 ಎಂಎಲ್‌ಡಿ ನೀರಿನ ಅವಶ್ಯಕತೆ ಇದ್ದು, ಕುಡಿವ ನೀರು ಮತ್ತು ನೈರ್ಮಲ್ಯ ಮಂಡಳಿ ದಿನವೊಂದಕ್ಕೆ ಕೇವಲ 500 ಎಂಎಲ್‌ಡಿ ನೀರನ್ನು ಒದಗಿಸಲಷ್ಟೇ ಸಾಧ್ಯವಾಗುತ್ತಿದೆ. ಇನ್ನು ನೀರಿನ ಟ್ಯಾಂಕರ್‌ಗೆ ಸರದಿಯಲ್ಲಿ ನಿಂತ ಪ್ರತಿ ವ್ಯಕ್ತಿಗೆ ತಲಾ 10 ಕೊಡಗಳಷ್ಟುನೀರಿನ ಮಿತಿ ಹೇರಲಾಗಿದ್ದು, ಪ್ರತಿ ಕುಟುಂಬ ಇಷ್ಟುನೀರಲ್ಲಿ ಬದುಕನ್ನು ನಡೆಸಬೇಕಾಗಿದೆ.

ಈ ನಡುವೆ ಮದ್ರಾಸ್‌ ಹೈಕೋರ್ಟ್‌ ತಮಿಳುನಾಡು ಸರ್ಕಾರಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಕುರಿತು ಚಾಟಿ ಬೀಸಿದೆ. ರಾಜ್ಯದ ಜಲಾಶಯಗಳು, ನೀರು ಸಂಗ್ರಹ ಸಾಮರ್ಥ್ಯ, ನಿರ್ವಹಣೆ, ಪ್ರಸ್ತುತ ಲಭ್ಯವಿರುವ ನೀರು ಹೀಗೆ ವಿವಿಧ ಮಾಹಿತಿ ಕುರಿತು ವರದಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ. ಬೇಸಿಗೆ ಆರಂಭಗೊಳ್ಳುತ್ತಿದ್ದಂತೆಯೇ ಹೆಚ್ಚಿದ ತಾಪಮಾನ, ಮಳೆಯ ಕೊರತೆಯಿಂದಾಗಿ ಚೆನ್ನೈ ಇತ್ತೀಚಿನ ದಿನಗಳಲ್ಲಿ ತೀವ್ರ ನೀರಿನ ಕೊರತೆ ಎದುರಿಸುತ್ತಿದೆ