ಮಕ್ಕಳ ಟಿಕೆಟ್ಗೆ ಅಡ್ಡಿಯಾಗಿದ್ದಕ್ಕೆ ಮೂಲ ಕಾಂಗ್ರೆಸ್ಸಿಗರ ಆಕ್ರೋಶ
ಕಾಂಗ್ರೆಸ್ ಟಿಕೆಟ್ ಹಂಚಿಕೆ ಮೇಲೆ ನಿಯಂತ್ರಣ ಸಾಧಿಸಲು ಮೂಲ ಕಾಂಗ್ರೆಸ್ಸಿಗರು ಹಾಗೂ ಸಿದ್ದು ಕಾಂಗ್ರೆಸ್ ನಡುವೆ ನಡೆದಿರುವ ಪೈಪೋಟಿಯ ಫಲವೇ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಅವರ ಪುತ್ರನ ಟ್ವೀಟ್ ಎಂದು ಕಾಂಗ್ರೆಸ್ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ
ಬೆಂಗಳೂರು : ಕಾಂಗ್ರೆಸ್ ಟಿಕೆಟ್ ಹಂಚಿಕೆ ಮೇಲೆ ನಿಯಂತ್ರಣ ಸಾಧಿಸಲು ಮೂಲ ಕಾಂಗ್ರೆಸ್ಸಿಗರು ಹಾಗೂ ಸಿದ್ದು ಕಾಂಗ್ರೆಸ್ ನಡುವೆ ನಡೆದಿರುವ ಪೈಪೋಟಿಯ ಫಲವೇ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಅವರ ಪುತ್ರನ ಟ್ವೀಟ್ ಎಂದು ಕಾಂಗ್ರೆಸ್ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಲ್ಲಿ ನಿಂತು ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಟಿಕೆಟ್ ಹಂಚಿಕೆಯನ್ನು ನಿಯಂತ್ರಿಸಲು ಯತ್ನಿಸಿದ್ದು ಮೂಲ ಕಾಂಗ್ರೆಸ್ಸಿಗರನ್ನು ಸಿಟ್ಟಿಗೆಬ್ಬಿಸಿದೆ. ಇತ್ತೀಚೆಗೆ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿಯ ಸಭೆಯಲ್ಲಿ ಇದು ವ್ಯಕ್ತವಾದರೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಉಪಸ್ಥಿತಿಯಿಂದಾಗಿ ವಿಕೋಪಕ್ಕೆ ಹೋಗಿರಲಿಲ್ಲ. ಆದರೆ, ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಪುತ್ರ ಹರ್ಷ ಮೊಯ್ಲಿ ಅವರ ಏಕ ಮಾತ್ರ ಹೆಸರು ಶಿಫಾರಸು ಆಗದಂತೆ ತಡೆದ ಮಹದೇವಪ್ಪ ಅವರ ಧೋರಣೆಯಿಂದ ಮೊಯ್ಲಿ ಅವರ ವ್ಯಗ್ರರಾಗಿದ್ದು, ಅದು ಟ್ವೀಟ್ ಸ್ವರೂಪ ಪಡೆದುಕೊಂಡಿದೆ ಎಂದು ಮೂಲಗಳು ಹೇಳುತ್ತವೆ.
ವಾಸ್ತವವಾಗಿ ಚುನಾವಣಾ ಸಮಿತಿಯಲ್ಲಿ ಮಹದೇವಪ್ಪ ಅವರು ತಮ್ಮ ವ್ಯಾಪ್ತಿಗೆ ಬರದ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಸೂಚಿಸಲು ಯತ್ನಿಸಿದ್ದು ಮತ್ತು ಏಕ ಹೆಸರು ಶಿಫಾರಸು ಆಗಿದ್ದ ಕೆಲ ಕ್ಷೇತ್ರಗಳಲ್ಲಿ ಪ್ಯಾನೆಲ್ (ಎರಡಕ್ಕಿಂತ ಹೆಚ್ಚು ಹೆಸರು) ಆಗುವಂತೆ ಮಾಡಿದ್ದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮೊಯ್ಲಿ ಹಾಗೂ ಮುನಿಯಪ್ಪ ಅವರಂತಹ ಮೂಲ ಕಾಂಗ್ರೆಸ್ಸಿಗರ ಮಕ್ಕಳು ಟಿಕೆಟ್ ಬಯಸಿದ್ದ ಕ್ಷೇತ್ರಗಳಿಗೆ ಏಕ ಹೆಸರು ಶಿಫಾರಸು ಆಗಿದ್ದನ್ನು ತಡೆದಿದ್ದು ಮೂಲ ಕಾಂಗ್ರೆಸ್ಸಿಗರನ್ನು ರೊಚ್ಚಿಗೆಬ್ಬಿಸಿದೆ. ಅದನ್ನು ಮೊಯ್ಲಿ ಮಾತ್ರ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಸಭೆ 2 ತಂಡವಾಗಿ ವಿಭಜನೆ:
ಕುತೂಹಲಕಾರಿ ಸಂಗತಿಯೆಂದರೆ, ಚುನಾವಣಾ ಸಮಿತಿ ಸಭೆಯಲ್ಲಿ ಸ್ಪಷ್ಟವಾಗಿ ಎರಡು ತಂಡಗಳು ನಿರ್ಮಾಣವಾಗಿದ್ದು, ಡಿ.ಕೆ. ಶಿವಕುಮಾರ್, ಪರಮೇಶ್ವರ್, ಮೊಯ್ಲಿ, ಮುನಿಯಪ್ಪ ಅವರಂತಹ ನಾಯಕರು ಒಂದಷ್ಟುಅಭ್ಯರ್ಥಿಗಳ ಪರ ವಾದಿಸಿದರೆ, ಅವರಿಗೆ ಪ್ರತಿ ಅಭ್ಯರ್ಥಿಗಳನ್ನು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಮಹದೇವಪ್ಪ ಹಾಗೂ ಮೋಟಮ್ಮ ಅವರಂತಹ ನಾಯಕರು ಸೂಚಿಸತೊಡಗಿದ್ದು ಟಿಕೆಟ್ ಹಂಚಿಕೆಯನ್ನು ಕ್ಲಿಷ್ಟಗೊಳಿಸಿತ್ತು ಎನ್ನಲಾಗಿದೆ.
ಮೂಲಗಳ ಪ್ರಕಾರ, ಟಿಕೆಟ್ ಹಂಚಿಕೆ ಸುಗಮಗೊಳಿಸಲು ಸಭೆಯಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಬೆಂಗಳೂರು ವಿಭಾಗಕ್ಕೆ ಡಿ.ಕೆ. ಶಿವಕುಮಾರ್ ನೇತೃತ್ವವಿದ್ದರೆ, ಮೊಯ್ಲಿ ಹಾಗೂ ಇತರರು ಸದಸ್ಯರಾಗಿದ್ದರು. ಅದೇ ರೀತಿ ಮೈಸೂರು ವಿಭಾಗಕ್ಕೆ ದಿನೇಶ್ ಗುಂಡೂರಾವ್ ನೇತೃತ್ವವಿದ್ದರೆ, ಮಹದೇವಪ್ಪ ಹಾಗೂ ಇತರರು ಸದಸ್ಯರಾಗಿದ್ದರು. ಉಳಿದ ಎರಡು ವಿಭಾಗಗಳಿಗೆ ಎಸ್.ಆರ್. ಪಾಟೀಲ್ ಹಾಗೂ ಹರಿಪ್ರಸಾದ್ ನೇತೃತ್ವ ವಹಿಸಿದ್ದರು. ಈ ತಂಡಗಳು ಅಂತಿಮಗೊಳಿಸಿದ ಪಟ್ಟಿಯನ್ನು ಅಂತಿಮವಾಗಿ ಹಿರಿಯ ಮುಖಂಡರ ಸಮ್ಮುಖ ತಂದು ಪಟ್ಟಿಯನ್ನು ಆಖೈರುಗೊಳಿಸುವ ಪ್ರಕ್ರಿಯೆ ಸಭೆಯಲ್ಲಿ ನಡೆದಿತ್ತು. ಈ ಪ್ರಕ್ರಿಯೆ ನಡೆಯುವಾಗ ಮಹದೇವಪ್ಪ ಅವರು ತಾವಿದ್ದ ವಿಭಾಗದ ವಿಚಾರದಲ್ಲಿ ಮಾತ್ರವಲ್ಲದೆ, ಬೆಂಗಳೂರು ವಿಭಾಗದಲ್ಲೂ ಮೂಗು ತೂರಿಸಿದ್ದೇ ಸಮಸ್ಯೆಯ ಮೂಲ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ನಾಲ್ಕು ವಿಚಾರಗಳಲ್ಲಿ ಮಹದೇವಪ್ಪ ಹಾಗೂ ಮೊಯ್ಲಿ ನೇತೃತ್ವದ ಮೂಲ ಕಾಂಗ್ರೆಸ್ಸಿಗರೊಂದಿಗೆ ಮಾತಿನ ಚಕಮಕಿ ನಡೆದಿದೆ. ಅವು-
ದೇವನಹಳ್ಳಿ ಕ್ಷೇತ್ರದ ಟಿಕೆಟ್:
ಡಿ.ಕೆ. ಶಿವಕುಮಾರ್ ನೇತೃತ್ವದ ಸಮಿತಿಯು ಈ ಕ್ಷೇತ್ರಕ್ಕೆ ಕಳೆದ ಬಾರಿಯ ಅಭ್ಯರ್ಥಿ ವೆಂಕಟಸ್ವಾಮಿ ಅವರ ಏಕ ಮಾತ್ರ ಹೆಸರು ಸೂಚಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಹದೇವಪ್ಪ ಅವರು ಚೆಲುವಾದಿ ನಾರಾಯಣ ಸ್ವಾಮಿ ಅವರ ಹೆಸರನ್ನು ಸೇರಿಸಿ ಪ್ಯಾನೆಲ್ ಮಾಡುವಂತೆ ಸಲಹೆ ನೀಡಿದ್ದಾರೆ. ಈ ಹಂತದಲ್ಲಿ ಡಿ.ಕೆ.ಶಿವಕುಮಾರ್ ಅವರು ಸ್ಥಳೀಯ ಸಂಸದರು (ವೀರಪ್ಪ ಮೊಯ್ಲಿ) ಸೂಚಿಸಿದ್ದರಿಂದ ವೆಂಕಟಸ್ವಾಮಿ ಅವರ ಒಂದೇ ಹೆಸರನ್ನು ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಮಹದೇವಪ್ಪ ಅವರು ‘ಎಲ್ಲಾ ಸಂಸದರೇ ಹೇಳಿದ್ದು ಮಾಡುವುದಾದರೇ ನಾವ್ಯಾಕೆ ಈ ಸಭೆಗೆ ಬರಬೇಕು’ ಎಂದಿದ್ದು ಮೊಯ್ಲಿ ಅವರಿಗೆ ಸಿಟ್ಟು ತರಿಸಿದೆ. ಆಗ ಮೊಯ್ಲಿ ಅವರು ‘ನಾನು ಈ ಕ್ಷೇತ್ರದ ಎಂಪಿ. ನೀವು ಯಾರದ್ದೋ ಹೆಸರು ಸೂಚಿಸಿ ಹೋಗುತ್ತೀರಿ. ಚುನಾವಣೆಯಲ್ಲಿ ಸೋಲುಂಟಾದರೆ ಹೈಕಮಾಂಡ್ಗೆ ಉತ್ತರಿಸಬೇಕಾದವರೂ ಸ್ಥಳೀಯ ಸಂಸದರಾದ ನಾವು. ಹೀಗಾಗಿ ಇಂತಹ ಮಾತು ಬೇಡ ಎಂದು ಎಚ್ಚರಿಕೆ ನೀಡಿದರು’ ಎನ್ನಲಾಗಿದೆ. ಅಂತಿಮವಾಗಿ ಮಹದೇವಪ್ಪ ಹಾಗೂ ಮೋಟಮ್ಮ ಅವರ ಲಾಬಿಯ ಪರಿಣಾಮ ಪ್ಯಾನೆಲ್ಗೆ ಚೆಲುವಾದಿ ನಾರಾಯಣ ಸ್ವಾಮಿ ಹೆಸರು ಸೇರ್ಪಡೆಯಾಗಿದೆ.
ಮಹದೇವಪುರ ಕ್ಷೇತ್ರ:
ಈ ಕ್ಷೇತ್ರಕ್ಕೆ ಎ.ಸಿ. ಶ್ರೀನಿವಾಸ್ ಅವರ ಏಕೈಕ ಹೆಸರನ್ನು ಶಿವಕುಮಾರ್ ನೇತೃತ್ವದ ಸಮಿತಿ ಸೂಚಿಸಿತ್ತು. ಆದರೆ, ಮುಖಂಡರ ಮುಂದೆ ಚರ್ಚೆಗೆ ಈ ವಿಚಾರ ಬಂದಾಗ ಮಹದೇವಪ್ಪ ಹಾಗೂ ಮೋಟಮ್ಮ ಅವರು ‘ನಲ್ಲೂರಹಳ್ಳಿ ನಾಗೇಶ್ ಅವರ ಹೆಸರನ್ನು ಸೇರಿಸಿ ಪ್ಯಾನೆಲ್ ಮಾಡಬೇಕು’ ಎಂದು ಒತ್ತಾಯಿಸಿದರು ಎನ್ನಲಾಗಿದೆ. ಇದು ಶಿವಕುಮಾರ್ ಹಾಗೂ ಮೊಯ್ಲಿ ಅವರಿಗೆ ಸಿಟ್ಟು ತರಿಸಿದ್ದು, ‘ಶ್ರೀನಿವಾಸ್ ಅತ್ಯಂತ ಕಡಿಮೆ ಮತಗಳಿಂದ ಕಳೆದ ಬಾರಿ ಸೋಲುಂಡಿದ್ದಾರೆ. ನೀವು ಸೂಚಿಸುತ್ತಿರುವ ನಲ್ಲೂರಹಳ್ಳಿ ನಾಗೇಶ್ ಪಕ್ಷದಲ್ಲಿ ಸಕ್ರಿಯರಾಗಿಲ್ಲ. ಅವರ ವಿರುದ್ಧ ಪಾರ್ಟಿ ವಿರುದ್ಧ ಕೆಲಸ ಮಾಡಿದ ಆರೋಪಗಳು ಇವೆ. ಹೀಗಾಗಿ ಅವರ ಹೆಸರು ಪ್ಯಾನೆಲ್ಗೆ ಸೂಚಿಸುವುದು ಬೇಡ’ ಎಂದು ಪ್ರಬಲವಾಗಿ ವಾದಿಸಿದ್ದಾರೆ. ಈ ಹಂತದಲ್ಲಿ ಹರಿಪ್ರಸಾದ್ ಅವರು ಸೂಚಿಸಿದ ಯಲ್ಲಪ್ಪ ಎಂಬುರನ್ನು ಸೇರಿಸಿ ಪ್ಯಾನೆಲ್ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ಕುಣಿಗಲ್ ಕ್ಷೇತ್ರದ ಜಟಾಪಟಿ:
ಕುಣಿಗಲ್ ಕ್ಷೇತ್ರಕ್ಕೆ ಶಿವಕುಮಾರ್ ನೇತೃತ್ವದ ಸಮಿತಿ ಡಾ. ರಂಗನಾಥ್ ಅವರ ಏಕೈಕ ಹೆಸರನ್ನು ಸೂಚಿಸಿದೆ. ಕುತೂಹಲಕಾರಿ ಸಂಗತಿಯೆಂದರೆ, ಡಾ. ರಂಗನಾಥ್ ಅವರು ಡಿ.ಕೆ. ಶಿವಕುಮಾರ್ ಅವರ ಪತ್ನಿಯ ತಂಗಿಯ ಪತಿ (ಷಡ್ಡಕ). ಆದರೆ, ಏಕ ಹೆಸರು ಶಿಫಾರಸಿಗೆ ಒಪ್ಪದ ಮಹದೇವಪ್ಪ ಅವರು ಮಾಜಿ ಶಾಸಕ ರಾಮಸ್ವಾಮಿ ಗೌಡ ಅವರ ಹೆಸರನ್ನು ಸೇರಿಸಿ ಪ್ಯಾನೆಲ್ ಮಾಡುವಂತೆ ಸೂಚಿಸಿದ್ದಾರೆ. ಇದು ಡಿಕೆಶಿ ಸಹೋದರರನ್ನು ಕೆರಳಿಸಿದ್ದು, ಇಬ್ಬರು ಮಹದೇವಪ್ಪ ವಿರುದ್ಧ ಮಾತನಾಡಿದ್ದಾರೆ. ಈ ಕ್ಷೇತ್ರದಲ್ಲಿ ಕೆಲಸ ಮಾಡಿ ಗೆಲ್ಲಿಸುವವರು ನಾವು. ನಿಮ್ಮ ವ್ಯಾಪ್ತಿಯಲ್ಲದ ಈ ಕ್ಷೇತ್ರದಲ್ಲಿ ನೀವು ಮಾತನಾಡುವುದು ಬೇಡ ಎಂದು ತಾಕೀತು ಮಾಡಿದರೂ ಎಂದು ಹೇಳಲಾಗಿದೆ. ಆದರೂ, ಮಹದೇವಪ್ಪ ಪಟ್ಟು ಬಿಡದ ಕಾರಣ ರಾಮಸ್ವಾಮಿಗೌಡ ಅವರಿದ್ದ ಪ್ಯಾನೆಲ್ ರಚನೆಯಾಗಿದೆ.
ಟಿ.ನರಸೀಪುರ ಟಿಕೆಟ್:
ಮೊಯ್ಲಿ ಹಾಗೂ ಮಹದೇವಪ್ಪ ವಿರುದ್ಧ ತೀವ್ರ ಮಾತಿನ ಚಕಮಕಿ ಹಾಗೂ ಮುನಿಸು ಉಂಟಾಗಿದ್ದು ಟಿ. ನರಸೀಪುರ ಕ್ಷೇತ್ರದ ಟಿಕೆಟ್ ಸಂದರ್ಭದಲ್ಲಿ ಹಾಗೂ ಇದಕ್ಕೆ ಸಂವಾದಿಯಾಗಿ ಕಾರ್ಕಳ ಕ್ಷೇತ್ರದ ವಿಚಾರವೂ ಪ್ರಸ್ತಾಪವಾದಾಗ ಎನ್ನುತ್ತವೆ ಮೂಲಗಳು. ಟಿ.ನರಸೀಪುರದಲ್ಲಿ ತಮ್ಮ ಪುತ್ರ ಸುನೀಲ್ ಬೋಸ್ ಹೆಸರು ಮಾತ್ರವಿದ್ದ ಪ್ಯಾನೆಲ್ ದಿನೇಶ್ ಗುಂಡೂರಾವ್ ನೇತೃತ್ವದ ಸಮಿತಿಯಿಂದ ಬಂದಿದೆ. ಈ ಸಮಿತಿಗೆ ಮಹದೇವಪ್ಪ ಅವರು ಸದಸ್ಯರು. ಆದರೆ, ಇದಕ್ಕೆ ಹಲವು ಮೂಲ ಕಾಂಗ್ರೆಸ್ ನಾಯಕರು ಆಕ್ಷೇಪಿಸಿದ್ದು, ‘ಸುನೀಲ್ ಬೋಸ್ಗೆ ಕ್ಷೇತ್ರ ಉತ್ತಮವಾಗಿಲ್ಲ ಎಂಬ ಸಮೀಕ್ಷೆ ವರದಿ ಬಂದಿದೆ. ಅಲ್ಲದೆ, ಸಿಎಂ ಅವರು ಇರುವ ಜಿಲ್ಲೆಯಿದು. ರಾಜ್ಯದ ಹೊಣೆ ಹೊತ್ತು ಅವರು ರಾಜ್ಯಾದ್ಯಂತ ಸಂಚರಿಸುತ್ತಾರೆ. ಹೀಗಾಗಿ ನೀವು ಮೈಸೂರು ಜಿಲ್ಲೆಯ ಹೊಣೆ ನೋಡಬೇಕಾಗುತ್ತದೆ. ಹೀಗಾಗಿ ನೀವು ಬೆಂಗಳೂರಿನ ಸಿ.ವಿ. ರಾಮನ್ನಗರಕ್ಕೆ ಬರುವುದು ಬೇಡ. ಟಿ.ನರಸೀಪುರದಲ್ಲೇ ಸ್ಪರ್ಧಿಸಿ’ ಎಂದು ಸಲಹೆ ನೀಡಿದರು ಎನ್ನಲಾಗಿದೆ.
ಇದಕ್ಕೆ ಕೂಡಲೇ ಒಪ್ಪಿಕೊಂಡಂತೆ ವರ್ತಿಸಿದ ಮಹದೇವಪ್ಪ ಅವರು, ‘ಸರಿ ಹಾಗಾದರೆ, ನನ್ನ ಮಗನಿಗೆ ಟಿಕೆಟ್ ಕೊಡುವುದು ಬೇಡ ಎಂದು ಪಕ್ಷ ನಿರ್ಧರಿಸಿದರೆ ನಾನು ಒಪ್ಪುತ್ತೇನೆ. ಇದು ಪಕ್ಷದ ನಿಯಮವೇ ಆಗಲಿ. ಕಾರ್ಕಳದಲ್ಲಿ ಮೊಯ್ಲಿ ಅವರ ಪುತ್ರನಿಗೆ, ಕೆಜಿಎಫ್ನಲ್ಲಿ ಮುನಿಯಪ್ಪ ಪುತ್ರಿಗೆ, ಜಯನಗರದಲ್ಲಿ ರಾಮಲಿಂಗಾರೆಡ್ಡಿ ಅವರ ಪುತ್ರಿಗೂ ಇದೇ ನಿಯಮ ಅನ್ವಯಿಸಿ’ ಎಂದಿದ್ದಾರೆ. ಇದು ಮೂಲ ಕಾಂಗ್ರೆಸ್ಸಿಗರನ್ನು ಗರಂ ಆಗಿಸಿದ್ದರೆ, ವಿಷಯ ಕೈ ಮೀರುತ್ತಿರುವುದನ್ನು ಅರಿತ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ‘ಅಪ್ಪ-ಮಕ್ಕಳು ಟಿಕೆಟ್ ಬಯಸಿರುವ ಕ್ಷೇತ್ರಗಳ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ಸಂಬಂಧಿ ಎಲ್ಲಾ ಕಡತಗಳನ್ನು ಪ್ರತ್ಯೇಕ ಮಾಡೋಣ. ಅದನ್ನು ಇಲ್ಲಿ ಚರ್ಚಿಸುವುದು ಬೇಡ ಎಂದು ಸೂಚಿದ್ದಾರೆ’ ಎನ್ನುತ್ತವೆ ಮೂಲಗಳು.
ಇದರ ಪರಿಣಾಮವಾಗಿ ಈ ಚರ್ಚೆಗಳಿಗೂ ಮೊದಲೇ ಕಾರ್ಕಳ ಕ್ಷೇತ್ರಕ್ಕೆ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಅವರ ಹೆಸರನ್ನು ಸೂಚಿಸಲಾಗಿತ್ತು. ಆಗ ಮಹದೇವಪ್ಪ ಅವರು ಉದಯಕುಮಾರ್ ಶೆಟ್ಟಿಹಾಗೂ ಇತರ ನಾಯಕರು ಗೋಪಾಲ ಭಂಡಾರಿ ಹೆಸರು ಸೂಚಿಸಿದ್ದರೂ ಪ್ಯಾನೆಲ್ ಆಗಿರಲಿಲ್ಲ. ಹರ್ಷ ಮೊಯ್ಲಿ ಹೆಸರು ಮಾತ್ರ ಸೂಚಿತವಾಗಿತ್ತು ಎನ್ನಲಾಗಿದೆ. ಆದರೆ, ಮಹದೇವಪ್ಪ ಅವರ ವಾದದ ಪರಿಣಾಮವಾಗಿ ಈ ಕ್ಷೇತ್ರ ಕೂಡ ಪ್ಯಾನೆಲ್ ಆಗಿ ಹೈಕಮಾಂಡ್ ಅವಗಾಹನೆಗೆ ಕಳುಹಿಸಲು ತೀರ್ಮಾನಗೊಂಡಿದೆ. ಇದು ವೀರಪ್ಪ ಮೊಯ್ಲಿ ಹಾಗೂ ಅವರ ಪುತ್ರ ಹರ್ಷ ಮೊಯ್ಲಿ ಅವರಿಗೆ ಮಹದೇವಪ್ಪ ವಿರುದ್ಧ ಸಿಟ್ಟುಬರಲು ಕಾರಣ ಎನ್ನುತ್ತವೆ ಮೂಲಗಳು.