ಜೆಡಿಎಸ್ 100 ಕ್ಷೇತ್ರದಲ್ಲಿ ಗೆದ್ದರೆ ಕುತ್ತಿಗೆ ಕೊಯ್ದಿಡುವೆ : ಜಮೀರ್ ಬಳಿಕ ಬಾಲಕೃಷ್ಣ ಟಾಂಗ್
ಮಾಜಿ ಮುಖ್ಯಮಂತ್ರಿಗಳು ಕುಮಾರಸ್ವಾಮಿ ಕ್ಷೇತ್ರಗಳಲ್ಲಿ ನಿಲ್ಲಿಸಲು ಅಭ್ಯರ್ಥಿಗಳೇ ಇಲ್ಲ ಎನ್ನುತ್ತಿದ್ದಾರೆ. ಮತ್ತೊಂದೆಡೆ ರೇವಣ್ಣ ಈಗಾಗಲೇ 100 ಮಂದಿ ಶಾಸಕರಿದ್ದಾರೆ ಎಂದು ಹೇಳುತ್ತಿದ್ದಾರೆ.
ರಾಮನಗರ(ಜು.27): ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದರೆ ರುಂಡ ಕತ್ತರಿಸಿಡುವೆ ಎಂದು ಶಾಸಕ ಜಮೀರ್ ಅಹಮದ್ ಹೇಳಿಕೆ ನೀಡಿದ ಬೆನ್ನಲ್ಲೇ ಮತ್ತೊಬ್ಬ ಜೆಡಿಎಸ್ ಬಂಡಾಯ ಶಾಸಕ ಎಚ್.ಸಿ. ಬಾಲಕೃಷ್ಣ, ರಾಜ್ಯದಲ್ಲಿ ಜೆಡಿಎಸ್ 100 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ನನ್ನ ಕುತ್ತಿಗೆ ಕೊಯ್ದು ಇಡುತ್ತೇನೆ ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳು ಕುಮಾರಸ್ವಾಮಿ ಕ್ಷೇತ್ರಗಳಲ್ಲಿ ನಿಲ್ಲಿಸಲು ಅಭ್ಯರ್ಥಿಗಳೇ ಇಲ್ಲ ಎನ್ನುತ್ತಿದ್ದಾರೆ. ಮತ್ತೊಂದೆಡೆ ರೇವಣ್ಣ ಈಗಾಗಲೇ 100 ಮಂದಿ ಶಾಸಕರಿದ್ದಾರೆ ಎಂದು ಹೇಳುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 100 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದಲ್ಲಿ ನನ್ನ ಕುತ್ತಿಗೆ ಕೊಯ್ದು ಇಡುತ್ತೇನೆ ಎಂದು ಸವಾಲು ಹಾಕಿದ್ದಾರೆ. ರೇವಣ್ಣ ನಮ್ಮನ್ನು ಚಂಗಲಾಟದವರು ಎಂದಿದ್ದಾರೆ. ನಾವು ಮೊದಲಿಗೆ ಅವರ ಜೊತೆಯಲ್ಲೇ ಇದ್ದವರು. ಅವರಿಂದಲೇ ಚಂಗಲಾಟ ಕಲಿತಿದ್ದೇವೆ ಎಂದು ತಿರುಗೇಟು ನೀಡಿದ ಬಾಲಕೃಷ್ಣ, 25 ವರ್ಷಗಳಿಂದ ಒಟ್ಟಿಗಿದ್ದಾಗ ಕಂಡು ಬರದ ಚಂಗಲಾಟ ಈಗ ಅವರ ವಿರುದ್ಧ ಮಾತನಾಡಿದ್ದಕ್ಕೆ ಕಾಣುತ್ತಿದೆಯೇ ಎಂದು ಪ್ರಶ್ನಿಸಿದರು.