ಮುಂದುವರಿದ ದಳ-ಕೈ ನಾಯಕರ ಮುನಿಸು - ಕಮಲಕ್ಕೆ ಗೆಲುವು ಸುಲಭವಾಗುತ್ತಾ ?
ಜೆಡಿಎಸ್ - ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಅಂಬಿ ಬೆಂಬಲಿಗರು ಹಾಗೂ ಮಾಜಿ ಸಚಿವ ಆತ್ಮಾನಂದ ಬಿಟ್ಟರೆ ಇನ್ಯಾವ ಕಾಂಗ್ರೆಸ್ ಮುಖಂಡರೂ ಸಭೆಗೆ ಆಗಮಿಸಿರಲಿಲ್ಲ. ಇನ್ನೂ ಸಭೆಗೆ ಹಾಕಿರೋ ಬ್ಯಾನರ್ ನಲ್ಲೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವರಾದ ಅಂಬರೀಶ್, ಆತ್ಮಾನಂದರ ಫೋಟೋ ಹೊರತುಪಡಿಸಿ ಇನ್ನುಳಿದ ಕಾಂಗ್ರೆಸ್ ಮುಖಂಡರ ಭಾವಚಿತ್ರಗಳು ನಾಪತ್ತೆಯಾಗಿದ್ದವು.
ಮಂಡ್ಯ[ಅ.24]: ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಜಿಲ್ಲೆಯ ನಾಯಕರ ನಡುವೆ ಇನ್ನೂ ಹೊಂದಾಣಿಕೆ ಆಗದೇ ಇರುವುದು ಮುನಿಸು ಮುಂದುವರೆಯಲು ಕಾರಣವಾಗಿದೆ.
ನಗರದ ಕನಕ ಭವನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಜೆಡಿಎಸ್ - ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಅಂಬಿ ಬೆಂಬಲಿಗರು ಹಾಗೂ ಮಾಜಿ ಸಚಿವ ಆತ್ಮಾನಂದ ಬಿಟ್ಟರೆ ಇನ್ಯಾವ ಕಾಂಗ್ರೆಸ್ ಮುಖಂಡರೂ ಸಭೆಗೆ ಆಗಮಿಸಿರಲಿಲ್ಲ.
ಇನ್ನೂ ಸಭೆಗೆ ಹಾಕಿರೋ ಬ್ಯಾನರ್ ನಲ್ಲೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವರಾದ ಅಂಬರೀಶ್, ಆತ್ಮಾನಂದರ ಫೋಟೋ ಹೊರತುಪಡಿಸಿ ಇನ್ನುಳಿದ ಕಾಂಗ್ರೆಸ್ ಮುಖಂಡರ ಭಾವಚಿತ್ರಗಳು ನಾಪತ್ತೆಯಾಗಿದ್ದವು. ಮಾಜಿ ಸಚಿವರಾದ ಚಲುವರಾ ಯಸ್ವಾಮಿ, ನರೇಂದ್ರಸ್ವಾಮಿ, ಮಾಜಿ ಶಾಸಕರಾದ ರಮೇಶ್ ಬಾಬು, ಕೆ.ಬಿ.ಚಂದ್ರಶೇಖರ್, ಪರಾಜಿತ ಅಭ್ಯರ್ಥಿಗಳಾದ ಮಧು ಮಾದೇಗೌಡ, ರವಿ ಕುಮಾರ್ ಗಣಿಗ ಭಾವಚಿತ್ರಗಳು ನಾಪತ್ತೆ ಆಗಿದ್ದವು.
ಲಕ್ಷ್ಮಿ ಅಶ್ವಿನ್ ಗೌಡ ಗೈರು: ಜೆಡಿಎಸ್ ನಿಂದ ಟಿಕೆಟ್ ಆಕಾಂಕ್ಷಿತರಾಗಿದ್ದ ಲಕ್ಷ್ಮಿ ಅಶ್ವಿನ್ ಗೌಡ ಮತ್ತೊಮ್ಮೆ ಸಭೆಗೆ ಗೈರು ಆಗುವ ಮೂಲಕ ತಮ್ಮ ಅಸಮಾಧಾನವನ್ನು ಮತ್ತೊಮ್ಮೆ ಹೊರ ಹಾಕಿದ್ದಾರೆ. ಲಕ್ಷ್ಮಿ ಅಶ್ವಿನ್ ಗೌಡರ ಗೈರು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದು, ಯಾರಿಗೆ ಮತ ಹಾಕಬೇಕು ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಉತ್ಸಾಹ: ಇಷ್ಟೆಲ್ಲಾ ಗೊಂದಲದ ನಡುವೆ ಜೆಡಿಎಸ್ ಕಾರ್ಯಕರ್ತರು ಉತ್ಸಾಹದಿಂದಲೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂಬಿ ಅಭಿಮಾನಿಗಳು ಸಭೆಯಲ್ಲಿ ಪಾಲ್ಗೊಂಡು ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರು ಗೆಲುವಿಗಾಗಿ ಶ್ರಮಿಸುವ ಭರವಸೆ ನೀಡಿದರು.