ಕೊಡಗಿನಲ್ಲಿ ಲಘು ಭೂ ಕಂಪನ: ಜನರಲ್ಲಿ ಆತಂಕ
- ರಿಕ್ಟರ್ ಮಾಪಕದಲ್ಲಿ 1ಕ್ಕಿಂತಲೂ ಕಡಿಮೆ ತೀರ್ವತೆ ದಾಖಲು
- ಮಧ್ಯಾಹ್ನ 12.53ಕ್ಕೆ ಭೂಮಿ 2-3 ಸೆಕೆಂಡ್ ಕಾಲ ಕಂಪನದ ಅನುಭವ
ಮಡಿಕೇರಿ[ಜು.10]: ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಸೋಮವಾರ ಮಧ್ಯಾಹ್ನ 1 ಗಂಟೆ ವೇಳೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನ ಭಯಭೀತರಾಗಿ ಮನೆಯಿಂದ ಹೊರಗೆ ಓಡಿಬಂದಿದ್ದಾರೆ.
ಭೂಕಂಪ ಎಂದು ಜನ ಆತಂಕ ಕೊಂಡಿದ್ದರು. ಆದರೆ ರಿಕ್ಟರ್ ಮಾಪಕದಲ್ಲಿ 1ಕ್ಕಿಂತಲೂ ಕಡಿಮೆ ತೀರ್ವತೆ ದಾಖಲಾಗಿದ್ದು ಇದು ಭೂಕಂಪವಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಸೋಮವಾರ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನ ಮನೆಯಿಂದ ಹೊರಗೆ ಓಡಿ ಬಂದ ಘಟನೆ ನಡೆದಿದೆ.
ಮಡಿಕೇರಿ ಸೇರಿ ಜಿಲ್ಲೆಯ ಸೋಮವಾರಪೇಟೆ, ಸುಂಟಿಕೊಪ್ಪ, ಚೆಟ್ಟಳ್ಳಿ ಮತ್ತಿತರ ಕಡೆಗಳಲ್ಲಿ ಮಧ್ಯಾಹ್ನ 12.53ಕ್ಕೆ ಭೂಮಿ 2-3 ಸೆಕೆಂಡ್ ಕಾಲ ಕಂಪಿಸಿದ ಅನುಭವವಾಗಿದೆ.
ಇದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಡಪ್ಪಾಡಿ, ಹರಿಹರಪಲ್ಲತ್ತಡ್ಕ, ಐನೆಕಿದು, ಬಾಳುಗೋಡು, ಕೊಲ್ಲಮೊಗ್ರ, ಕಲ್ಮಕಾರು ಭಾಗದ ಜನರಿಗೂ ಮಧ್ಯಾಹ್ನ 12.50ರಿಂದ 1.10ರ ಅವಧಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್ .ಕಾಂ ಸೋದರ ಪತ್ರಿಕೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿರುವ ವಿಜ್ಞಾನಿ ರೇಷ್ಮಾ, ಕಂಪನದ ತೀವ್ರತೆ 1ಕ್ಕಿಂತ ಕಮ್ಮಿ ಎಂದಿದ್ದಾರೆ.
ಆದರೆ ಹವಾಮಾನ ಇಲಾಖೆ 3.4ರ ತೀವ್ರತೆ ಇತ್ತು ಎಂದಿದೆ. ಇದು ಭೂಕಂಪವಲ್ಲ ಈ ನಡುವೆ, ಇದು ಭೂಕಂಪದಿಂದಲ್ಲ. ಭಾರಿ ಮಳೆಯ ಸಂದರ್ಭದಲ್ಲಿ ಭೂಮಿ ಸಡಿಲಗೊಂಡು ಅದುರುವುದರಿಂದ ಉಂಟಾಗುವ ಸಹಜ ಕಂಪನ ಅಷ್ಟೆ ಎಂದು ರಾಜ್ಯ ಕಂದಾಯ ಇಲಾಖೆ ಸ್ಪಷ್ಟನೆ ನೀಡಿದೆ. ಈ ಭಾಗದ ಭೂಮಿಯಡಿಯ ಶಿಲಾಪದರವು 18ರಿಂದ 25 ಮೀ.ನಷ್ಟು ದಪ್ಪದ ಆವೆಮಣ್ಣಿನ ಪದರದಿಂದ ಆವೃತವಾಗಿದೆ.
ಭಾರಿ ಮಳೆಯಾದಾಗ ಈ ಆವೆಮಣ್ಣಿನ ಪದರದೊಳಗೆ ನೀರು ನುಗ್ಗಿ ಗುಹೆಯಂಥ ನಿರ್ವಾತ ಪ್ರದೇಶ ನಿರ್ಮಾಣವಾಗುತ್ತದೆ. ಆಗ ಭೂಮಿಯಲ್ಲಿ ಸಣ್ಣ ಮಟ್ಟಿನ ಕಂಪನ ಉಂಟಾಗುತ್ತದೆ. ಆದರೆ, ಇದು ಭೂಕಂಪವಲ್ಲ ಎಂದು ಈ ಕುರಿತು ಪ್ರಕಟಣೆ ನೀಡಿರುವ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ತಿಳಿಸಿದ್ದಾರೆ.