ಜೆಡಿಎಸ್ ಮುಖಂಡ ಹಾಗೂ ಲೋಕೋಪಯೋಗಿ ಸಚಿವರಾದ ಎಚ್.ಡಿ ರೇವಣ್ಣ ಇದೀಗ ಹೊಸ ಬಾಂಬ್ ಒಂದನ್ನು ಸ್ಫೋಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾಲ ಮನ್ನಾಗೆ ಹಣ ನೀಡಲು ಒಪ್ಪಿದ್ದರು, ಆದರೆ ಬಿಜೆಪಿ ನಾಯಕರು ಅದಕ್ಕೆ ಅಡ್ಡಿಯಾದರು ಎಂದು ಹೇಳಿದ್ದಾರೆ. 

ಹಾಸನ:  ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಬೇಕಾದ ಹಣವನ್ನು ನೀಡಲು ಒಪ್ಪಿದ್ದರು. ಆದರೆ, ರಾಜ್ಯ ಬಿಜೆಪಿ ಮುಖಂಡರು ಸಿಎಂ ಕುಮಾರಸ್ವಾಮಿಗೆ ಪ್ರಶಂಸೆ ಹೋಗುತ್ತದೆ ಎಂದು ಹೇಳಿ ಹಣ ಕೊಡಲು ಬಿಡಲಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದ್ದಾರೆ.

Add Asianetnews Kannada as a Preferred SourcegooglePreferred

ಭಾನುವಾರ ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದಾಗ ಮೋದಿ ಅವರು ಸಂಪೂರ್ಣ ಸಾಲ ಮನ್ನಾ ಮಾಡುವ ಬಗ್ಗೆ ಅಗತ್ಯವಾದ ಆರ್ಥಿಕ ನೆರವು ನೀಡಲು ಒಪ್ಪಿದ್ದರು. ಆದರೆ, ಮಾರನೇ ದಿನವೇ ರಾಜ್ಯದ ಬಿಜೆಪಿ ಮುಖಂಡರು ಕೊಡಲು ಬಿಡಲಿಲ್ಲ ಎಂದು ಹೇಳಿದರು. 

ಹೀಗೆ ರಾಜ್ಯ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಬಿಡದ ಬಿಜೆಪಿಯವರು, ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ಎಲ್ಲದರಲ್ಲೂ ಅನ್ಯಾಯವಾಗಿದೆ ಎಂದು ಬೊಬ್ಬೆ ಹಾಕುತ್ತಾರೆ. ಅವರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.