ಜಿ.ಟಿ. ದೇವೇಗೌಡ ಬಿಜೆಪಿಗೆ.. ಅವರೇ ಕೊಟ್ಟ ಉತ್ತರ ಕೇಳಿ!
ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ಜತೆಗೆ ಪಕ್ಷೇತರ ಶಾಸಕರ ಭೇಟಿ ಮಾಡಿ ಸರಕಾರವನ್ನು ಭದ್ರ ಮಾಡಿಕೊಳ್ಳುವತ್ತ ಚಿತ್ತ ಹರಿಸಿದ್ದಾರೆ. ಆದರೆ ಊಹಾಪೋಹಗಳಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ.
ಮೈಸೂರು[ಜೂ. 04] ‘ನಾನು ಎಷ್ಟು ಸಾರಿ ಹೇಳಿದ್ದೇನೆ. ಇಲ್ಲಿಯವರೆಗೆ ನನ್ನನ್ನು ಒಬ್ಬನೇ ಒಬ್ಬ ಬಿಜೆಪಿ ನಾಯಕ ಭೇಟಿ ಮಾಡಿಲ್ಲ. ನಾನು ಯಾಕೆ ಬಿಜೆಪಿಗೆ ಹೋಗಲಿ?’ ಎಂದು ಸಚಿವ ಜಿ.ಟಿ.ದೇವೇಗೌಡ ಮಾಧ್ಯಮಗಳಿಗೆ ಪ್ರಶ್ನೆ ಮಾಡಿದರು.
ನಾನೇ ಉಸ್ತುವಾರಿ ಸಚಿವನಿದ್ದೇನೆ. ಉನ್ನತ ಶಿಕ್ಷಣ ಸಚಿವನಾಗಿದ್ದೇನೆ. ಬಿಜೆಪಿ ನಾಯಕರ ಜೊತೆ ಇದ್ದ ಮಾತ್ರಕ್ಕೆ ಬಿಜೆಪಿ ಜೊತೆ ಹೋಗುತ್ತೇನೆ ಅಂತನಾ? ಮುಂದಿನ ನಾಲ್ಕು ವರ್ಷಗಳ ಕಾಲ ಸರ್ಕಾರದಲ್ಲಿಯೇ ಇರುತ್ತೇನೆ ಎಂದು ಹೇಳಿದರು.
ಅತ್ತ ರೋಶನ್ , ರಾಮಲಿಂಗಾರೆಡ್ಡಿ ಸ್ಫೋಟ, ಇತ್ತ ಕೈ ಹಿರಿಯ ಸಚಿವರ ನಡುವೆ ಕಿತ್ತಾಟ
ಎಚ್.ವಿಶ್ವನಾಥ್ ರಾಜೀನಾಮೆಗೆ ಸಮನ್ವಯ ಕೊರತೆ ಹಾಗೂ ಎಚ್.ಡಿ.ದೇವೇಗೌಡರ ಸೋಲು ಕಾರಣ ಅಲ್ಲ. ಮೋದಿ ಅಲೆ ಕಾರಣಕ್ಕೆ ಬಿಜೆಪಿ ದೊಡ್ಡ ಗೆಲುವು ಸಾಧಿಸಿತು. ಇದರಿಂದಲ್ಲೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಹೀನಾಯ ಸ್ಥಿತಿಗೆ ಬಂದಿತು ಎಂದು ವಿಶ್ಲೇಷಣೆ ಮಾಡಿದರು.
ಕಾಂಗ್ರೆಸ್ ಗೆ ಕೂಡ ಇಂದು ನಿರ್ಣಾಯಕ ಪರಿಸ್ಥಿತಿ. ಕಾಂಗ್ರೆಸ್ ಹಾಗೂ ಜೆಡಿಎಸ್ ಉಳಿಯಲು ಕರ್ನಾಟಕದಿಂದಲೇ ಯಶಸ್ಸು ಕಾಣಬೇಕು. ಕಾಂಗ್ರೆಸ್ ನಲ್ಲೂ ಸೋಲಿನ ಬಗ್ಗೆ ತಿಳಿಯಲು ಒಂದು ಕಮಿಟಿ ಮಾಡಿದ್ದಾರೆ. ಅದೇ ಜೆಡಿಎಸ್ ನಲ್ಲಿಯೂ ಸೋಲಿನ ಬಗ್ಗೆ ತಿಳಿಯಲು ಒಂದು ಕಮಿಟಿ ಮಾಡುತ್ತೇವೆ. ಕಮಿಟಿಯಲ್ಲಿ ಸೋಲಿನ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.