ಮೋದಿ ಮಾಸ್ಟರ್ ಸ್ಟ್ರೋಕನ್ನು ರಾಜಕಾರಣಿಗಳ ಮೇಲೆ ಮಾಡಿರುವ ಸರ್ಜಿಕಲ್ ಸ್ಟ್ರೈಕ್ ಎಂದು ಬಣ್ಣಿಸಿದ ಜಿ.ಎಂ ಸಿದ್ದೇಶ್ವರ್
ರೂ.500 ಹಾಗೂ ರೂ.1000 ನೋಟುಗಳನ್ನು ರದ್ದು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ಸ್ವಾಗತಿಸಿರುವ ಸಂಸದ ಜಿ.ಎಂ.ಸಿದ್ದೇಶ್ವರ ರಾಜಕಾರಣಿಗಳ ಮೇಲೆ ಮಾಡಿರುವ ಸರ್ಜಿಕಲ್ ದಾಳಿ ಇದಾಗಿದೆ ಎಂದು ಬಣ್ಣಿಸಿದ್ದಾರೆ.
ದಾವಣಗೆರೆ (ನ.09): ರೂ.500 ಹಾಗೂ ರೂ.1000 ನೋಟುಗಳನ್ನು ರದ್ದು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ಸ್ವಾಗತಿಸಿರುವ ಸಂಸದ ಜಿ.ಎಂ.ಸಿದ್ದೇಶ್ವರ ರಾಜಕಾರಣಿಗಳ ಮೇಲೆ ಮಾಡಿರುವ ಸರ್ಜಿಕಲ್ ದಾಳಿ ಇದಾಗಿದೆ ಎಂದು ಬಣ್ಣಿಸಿದ್ದಾರೆ.
ಕಪ್ಪು ಹಣ ಹೊಂದಿದ ಕಾಳಸಂತೆಕೋರರಿಗೆ, ದೇಶದ ಆರ್ಥಿಕ ವ್ಯವಸ್ಥೆಯನ್ನು ಅಲುಗಾಡಿಸಲು ಯೋಜನೆ ಹಾಕುತ್ತಿದ್ದ ಉಗ್ರಗಾಮಿಗಳಿಗೆ, ಭ್ರಷ್ಟ ಅಧಿಕಾರಿಗಳಿಗೆ, ಕಪ್ಪು ಹಣ ಹೊಂದಿರುವ ರಾಜಕಾರಣಿಗಳು ಭಯಭೀತರಾಗಿದ್ದಾರೆ. ಭಾರತದ ಸಮಗ್ರ ಅಭಿವೃದ್ಧಿ ಹಾಗೂ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತುಂಗದ ಶಿಖರಕ್ಕೆ ಏರಿಸುವ ದೃಷ್ಟಿಯಿಂದ ಇದೊಂದು ದಿಟ್ಟ ಹಾಗೂ ಐತಿಹಾಸಿಕ ನಿರ್ಣಯವಾಗಿದೆ ಎಂದು ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೋಟುಗಳ ಚಲಾವಣೆ ರದ್ದು ಮಾಡಿರುವ ಕ್ರಮಕ್ಕೆ ಸಾಮಾನ್ಯ ನಾಗರಿಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅವಶ್ಯಕತೆಯಿಲ್ಲ, ಕೇವಲ ಮೂರ್ನಾಲ್ಕು ದಿನಗಳ ಕಾಲ ಸ್ವಲ್ಪ ಅನಾನುಕೂಲ ಉಂಟಾಗಬಹುದು. ಇದರ ಹೊರತಾಗಿ ನಿಮ್ಮಲ್ಲಿರುವ ಹಣವನ್ನು ನಿಶ್ಚಿಂತೆಯಿಂದ ಬ್ಯಾಂಕಿನಲ್ಲಿ ಜಮಾ ಮಾಡಬಹುದು ಎಂದು ಸಲಹೆ ಮಾಡಿದ್ದಾರೆ.
ಇದು ಕಪ್ಪು ಹಣ ಹೊಂದಿದವರ ಮೇಲೆ ಸಾರಿರುವ ಯುದ್ದವೇ ಹೊರತು ಸಾಮಾನ್ಯ ಜನರ ಮೇಲೆ ಅಲ್ಲ. ಕೊನೆಯಲ್ಲಿ ಇದರ ಲಾಭ ದೇಶದ ಸಾಮಾನ್ಯ ನಾಗರಿಕರಿಗೆ ಸಿಗಲಿದೆ. ವ್ಯಕ್ತಿಗತವಾಗಿ ಯಾರಿಗೆ ಲಾಭವಾಗುತ್ತೆ, ಯಾರಿಗೆ ನಷ್ಟವಾಗುತ್ತೆ ಎಂದು ಲೆಕ್ಕ ಹಾಕದೇ ದೇಶಕ್ಕೆ ಒಳ್ಳೆಯದು ಮಾಡಲು ಇಂತಹ ನಿರ್ಧಾರ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಸಿದ್ದೇಶ್ವರ ಮನವಿ ಮಾಡಿದ್ದಾರೆ.