ವ್ಯಕ್ತಿಯೊಬ್ಬರ ಹೆಸರಲ್ಲಿದೆ ಮಿನಿ ವಿಧಾನಸೌಧ
ಈ ಕಟ್ಟಡ 6 ತಿಂಗಳ ಹಿಂದೆಯೇ ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ, ಭೂ ಮಾಲೀಕನಿಗೆ ಮಾತ್ರ ಈವರೆಗೆ ಪರಿಹಾರ ಸಿಕ್ಕಿಲ್ಲ. ಪರಿಹಾರಕ್ಕಾಗಿ 2012 ರಿಂದ ಇಲ್ಲಿಯವರೆಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಂದಾಯ ಸಚಿವರಿಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಮಾಲೀಕನಿಗೆ ಪರಿಹಾರ ಸಿಕ್ಕಿಲ್ಲ.
-ಶಂಕರಬಾಬು ರೆಡ್ಡಿ
ಯಾದಗಿರಿ(ಅ.25): ರಾಜ್ಯದ ನೂತನ ಜಿಲ್ಲೆಯಾಗಿ 2009ರಲ್ಲಿ ಉದಯವಾದ ಯಾದಗಿರಿಗೆ ಮಿನಿ ವಿಧಾನಸೌಧವೂ ಮಂಜೂರಾಯಿತು, ಭೂಮಿ ಸ್ವಾಧೀನಪಡಿಸಿಕೊಂಡು ಸೌಧ ನಿರ್ಮಾಣವನ್ನೂ ಮಾಡಲಾಯಿತು. ಆದರೆ, ಭೂಮಿಯನ್ನು ಖಾಸಗಿ ವ್ಯಕ್ತಿಯ ಹೆಸರಿನಿಂದ ಈ ವರೆಗೆ ಜಿಲ್ಲಾಡಳಿತದ ಹೆಸರಿಗೆ ವರ್ಗಾವಣೆಯನ್ನೇ ಮಾಡಿಲ್ಲ. ಭೂ ಮಾಲೀಕನಿಗೆ ಪರಿಹಾರವನ್ನೂ ನೀಡಿಲ್ಲ. ಹೀಗಾಗಿ ಮಾಲೀಕ ತನಗೆ ಪರಿಹಾರ ನೀಡಿ, ಆನಂತರ ಸೌಧದ ಉದ್ಘಾಟನೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ.
ಹೌದು, ಇದು ಯಾದಗಿರಿ ನಗರದಲ್ಲಿ ತಲೆಎತ್ತಿ ನಿಂತಿರುವ ಮಿನಿ ವಿಧಾನಸೌಧದ ಕತೆ. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸರ್ಕಾರ 2011ರಲ್ಲಿ ನಗರದ ಚಿತ್ತಾಪುರ ರಸ್ತೆಯಲ್ಲಿರುವ ನಜಮುದ್ದೀನ್ ಅಬ್ದುಲ್ ಹೈ ಎಂಬುವವರಿಗೆ ಸೇರಿದ 2 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿತು. ಇದಕ್ಕೆ ಪರಿಹಾರವಾಗಿ .36,94,197 ನಿಗದಿ ಮಾಡಿತ್ತು. ನಂತರ ಆ ಜಾಗದಲ್ಲಿ .45 ಲಕ್ಷ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಯಿತು. ಈ ಕಟ್ಟಡ 6 ತಿಂಗಳ ಹಿಂದೆಯೇ ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ, ಭೂ ಮಾಲೀಕನಿಗೆ ಮಾತ್ರ ಈವರೆಗೆ ಪರಿಹಾರ ಸಿಕ್ಕಿಲ್ಲ. ಪರಿಹಾರಕ್ಕಾಗಿ 2012 ರಿಂದ ಇಲ್ಲಿಯವರೆಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಂದಾಯ ಸಚಿವರಿಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಮಾಲೀಕನಿಗೆ ಪರಿಹಾರ ಸಿಕ್ಕಿಲ್ಲ. ಅಲ್ಲದೆ, ಭೂಮಿಯನ್ನು ಜಿಲ್ಲಾಡಳಿತ ತನ್ನ ಹೆಸರಿಗೆ ವರ್ಗಾಯಿಸಿಕೊಂಡಿಲ್ಲ. ಹೀಗಾಗಿ ಸೌಧ ನಿವೇಶನ ಮಾಲೀಕನ ಹೆಸರಲ್ಲೇ ಇದೆ.