ಉಗ್ರರ ಕಟುಂಬದ ತಂಟೆಗೆ ಬಂದರೆ ಹುಷಾರ್: ಮಾಜಿ ಸಿಎಂ ಎಚ್ಚರಿಕೆ!
ಉಗ್ರರ ಕಟುಂಬದ ತಂಟೆಗೆ ಬಂದರೆ ಹುಷಾರ್ ಎಂದು ಮಾಜಿ ಸಿಎಂ ಎಚ್ಚರಿಕೆ ನೀಡಿದ್ದಾರೆ.
ಶ್ರೀನಗರ[ಡಿ.31]: ಕಾಶ್ಮೀರ ಕಣಿವೆಯಲ್ಲಿ ಉಗ್ರರ ಬೆಂಬಲಕ್ಕೆ ನಿಂತಿರುವ ಜಮ್ಮು- ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ‘ಒಂದು ವೇಳೆ ಉಗ್ರರ ಕುಟುಂಬಗಳಿಗೆ ಪೊಲೀಸರು ಕಿರುಕುಳ ನೀಡುವುದನ್ನು ನಿಲ್ಲಿಸದೇ ಇದ್ದರೆ ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾದೀತು’ ಎಂದು ಎಚ್ಚರಿಕೆ ನೀಡಿದ್ದಾರೆ.
ಪುಲ್ವಾಮಾ ಜಿಲ್ಲೆಯಲ್ಲಿ ಪೊಲೀಸರಿಂದ ಥಳಿತಕ್ಕೆ ಒಳಾಗಾದ ಶಂಕಿತ ಉಗ್ರನೊಬ್ಬನ ಸೋದರಿ ರುಬಿನಾ ಎಂಬಾಕೆಯ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮೆಹಬೂಬಾ, ‘ಉಗ್ರನ ಸೋದರಿಯ ತಪ್ಪಾದರೂ ಏನು? ಆಕೆಯನ್ನು ನಗ್ನ ಗೊಳಿಸಿ ಥಳಿಸಲಾಗಿದೆ. ನೀವು ಉಗ್ರರ ವಿರುದ್ಧ ಹೋರಾಡಲು ಬಯಸಿದರೆ ಅವರ ಸಂಬಂಧಿಗಳು ಹಾಗೂ ಸೋದರಿಯರನ್ನು ಏಕೆ ಥಳಿಸುತ್ತೀರಿ ಎಂದು ರಾಜ್ಯಪಾಲರನ್ನು ಪ್ರಶ್ನಿಸಲು ನಾನು ಬಯಸುತ್ತೇನೆ. ಈ ರೀತಿಯ ಘಟನೆಗಳನ್ನು ನಾವು ಸಹಿಸುವುದಿಲ್ಲ. ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಘಟನೆಯಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಉಗ್ರರ ಕುಟುಂಬಗಳ ಮೇಲೆ ಕಿರುಕುಳ ನಿಲ್ಲದೇ ಇದ್ದರೆ, ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿ ಇನ್ನಷ್ಟುಬಿಗಡಾಯಿಸಲಿದೆ’ ಎಂದು ಹೇಳಿದ್ದಾರೆ.