ಮುಫ್ತಿ ಸಂಪುಟಕ್ಕೆ ಕಳಂಕಿತ ಬಿಜೆಪಿ ಸಚಿವ
ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ- ಬಿಜೆಪಿ ಮೈತ್ರಿ ಸರ್ಕಾರವನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಸೋಮವಾರ ತಮ್ಮ ಸಚಿವ ಸಂಪುಟವನ್ನು ಪುನಾರಚನೆ ಮಾಡಿದ್ದಾರೆ. ಈ ವೇಳೆ ಬಿಜೆಪಿಯ 8 ಜನ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಪೈಕಿ ಹಾಲಿ ಸ್ಪೀಕರ್ ಹುದ್ದೆಯಲ್ಲಿದ್ದ ಕವಿಂದರ್ ಗುಪ್ತಾ ಅವರನ್ನು ನೂತನ ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಜಮ್ಮು-ಕಾಶ್ಮೀರ (ಮೇ. 01): ಪಿಡಿಪಿ- ಬಿಜೆಪಿ ಮೈತ್ರಿ ಸರ್ಕಾರವನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಸೋಮವಾರ ತಮ್ಮ ಸಚಿವ ಸಂಪುಟವನ್ನು ಪುನಾರಚನೆ ಮಾಡಿದ್ದಾರೆ. ಈ ವೇಳೆ ಬಿಜೆಪಿಯ 8 ಜನ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಪೈಕಿ ಹಾಲಿ ಸ್ಪೀಕರ್ ಹುದ್ದೆಯಲ್ಲಿದ್ದ ಕವಿಂದರ್ ಗುಪ್ತಾ ಅವರನ್ನು ನೂತನ ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಜಮ್ಮು-ಕಾಶ್ಮೀರದ ಬಿಜೆಪಿ ಘಟಕದ ಅಧ್ಯಕ್ಷ ಸತ್ಪಾಲ್ ಶರ್ಮಾ ಸಚಿವ ಹುದ್ದೆ ಪಡೆದ ಪ್ರಮುಖರು ಈ ಹಿಂದೆ ಡಿಸಿಎಂ ಆಗಿದ್ದ ಬಿಜೆಪಿಯ ನಿರ್ಮಲ್ ಸಿಂಗ್, ಆರೋಗ್ಯ ಸಚಿವ ಬಾಲಿ ಭಗತ್ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದ ಪ್ರಿಯಾ ಸೇಠಿ ಅವರಿಗೆ ಮುಫ್ತಿ ಸಂಪುಟದಿಂದ ಕೊಕ್ ನೀಡಲಾಗಿದೆ. ನಿರ್ಮಲ್ಸಿಂಗ್ಗೆ ಸ್ಪೀಕರ್ ಹುದ್ದೆ ನೀಡಲಾಗಿದೆ. ಕಠುವಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳ ಪರವಾಗಿ ಬಿಜೆಪಿ ಸಚಿವರಾದ ಲಾಲ್ ಸಿಂಗ್ ಮತ್ತು ಚಂದರ್ ಪ್ರಕಾರ್ ಗಂಗಾ ಅವರು ಪ್ರತಿಭಟನೆ ಕೈಗೊಂಡಿದ್ದರು.
ಇದರಿಂದ ವ್ಯಾಪಕ ಟೀಕೆಗೆ ಗುರಿಯಾಗಿ, ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆಗೆ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ನಿರ್ಧರಿಸಿದ್ದರು. ಆದರೆ ಇದೇ ರ್ಯಾಲಿಯಲ್ಲಿ ಭಾಗಿಯಾಗಿದ್ದ ಕಠುವಾ ಕ್ಷೇತ್ರದ ಬಿಜೆಪಿ ಶಾಸಕ ರಾಜೀವ್ ಜಸ್ರೋತಿಯಾ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದು ಮತ್ತೆ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.