ಮಂಡ್ಯದ ಬಿಎಂಟಿಸಿ ನಿರ್ವಾಹಕ, ಇನ್ನೊಂದು ಹೆಜ್ಜೆ ಇಟ್ಟರೆ ಐಎಎಸ್ ಸಾಧಕ
ಐಎಎಸ್ ಹಾದಿಯಲ್ಲಿ ಬಿಎಂಟಿಸಿ ಕಂಡಕ್ಟರ್/ ಕೆಲಸ ಮಾಡುತ್ತಲೇ ಸ್ವಂತ ಅಧ್ಯಯನ/ ಯಾವುದೇ ಕೋಚಿಂಗ್ ಕ್ಲಾಸ್ ಇಲ್ಲ/ ಸಂದರ್ಶನ ಪೂರ್ಣವಾದರೆ ಕಂಡಕ್ಟರ್ ಐಎಎಸ್
ಬೆಂಗಳೂರು(ಜ. 28) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಕಂಡಕ್ಟರೊಬ್ಬರು ಐಎಎಸ್ ಮುಖ್ಯ ಪರೀಕ್ಷೆ ತೇರ್ಗಡೆ ಹೊಂದಿ ಸಾಧನೆಯ ಹೆಜ್ಜೆ ಇಟ್ಟಿದ್ದಾರೆ.
ಬಿಎಂಟಿಸಿ ಬಸ್ನಲ್ಲಿ ಕಂಡಕ್ಟರ್ ಆಗಿ ನಿರಂತರವಾಗಿ ಕೆಲಸ ಮಾಡುತ್ತ ಸಾಧನೆ ಮಾಡಿ ತೋರಿಸಿದ್ದಾರೆ. ಈ ಕಂಡಕ್ಟರ್ ಮಧು ಎನ್ ಸಿ ಎನ್ನುವರು 2019 ರ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಇ) ಮುಖ್ಯ ಪರೀಕ್ಷೆಯಲ್ಲಿ ಪಾಸಾಗಿ ಸಂದರ್ಶನಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಐಎಎಸ್ ಕಡೆ ಹೆಜ್ಜೆ: ಮಂಡ್ಯ ಜಿಲ್ಲೆಯ ಮಳವಳ್ಳಿಯ 29 ವಯಸ್ಸಿನ ಮಧು ಎನ್ ಸಿ ಕನಸುಗಳು ದೊಡ್ಡವು. ಕುಟುಂಬದ ಬಡತನ ನೀಗಿಸಲು ಕಳೆದ 10 ವರ್ಷಗಳ ಹಿಂದೆ ಹಿಂದೆ ಕಂಡಕ್ಟರ್ ಆಗಿ ಕೆಲಸಕ್ಕೆ ಸೇರಿದ್ದರು. ಕೆಲಸದ ಜೊತೆ ಮಧು ದೂರ ಶಿಕ್ಷಣದಿಂದ ಪದವಿ ಪಡೆದುಕೊಳ್ಳುತ್ತಾ ಸಾಗಿದ್ದರು. ಮೊದಲು ಕೆಎಎಸ್ ಮಾಡಬೇಕು ಎಂದಿದ್ದವರು ನಂತರ ಐಎಎಸ್ ಕಡೆಗೆ ಹೆಜ್ಜೆ ಹಾಕಿದರು.
ದೂರ ಶಿಕ್ಷಣವೇ ಆಧಾರ: ದೂರ ಶಿಕ್ಷಣದಿಂದಲೇ ರಾಜ್ಯಶಾಸ್ತ್ರದಲ್ಲಿ ಎಂ ಎ ಮಾಡಿರುವ ಮಧು ಅವರು ರಾಜ್ಯಶಾಸ್ತ್ರ ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳು ವಿಷಯದಲ್ಲಿ ಐಎಎಸ್ ಪರೀಕ್ಷೆ ಎದುರಿಸಲು ಸಜ್ಜಾಗಿ ಎದುರುಸಿ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.. ತಮ್ಮ ಕಂಡಕ್ಟರ್ ಕೆಲಸದ ಜೊತೆ ದಿನಕ್ಕೆ ಎಂಟು ತಾಸು ಅಧ್ಯಯನ ಇವರ ಪ್ರತಿ ದಿನದ ವಾಡಿಕೆ.
ಹೆಜ್ಜೆ ಹಿಂದಿಡದ ಸಾಧಕ: 2014ರಲ್ಲಿ ಕೆಎಎಸ್ ಕ್ಲಿಯರ್ ಮಾಡಲು ಸಾಧ್ಯವಾಗದಿದ್ದರೂ ತಮ್ಮ ಗುರಿಯಿಂದ ಮಧು ಹಿಂದೆ ಸರಿಯಲಿಲ್ಲ. 2018ಕ್ಕೆ ಹೊಸದೊಂದಿಷ್ಟು ಸಿದ್ಧತೆ ಮಾಡಿಕೊಂಡರು. ಮೊದಲು 5 ತಾಸು ದಿನಕ್ಕೆ ಅಧ್ಯಯನ ಮಾಡುತ್ತಿದ್ದೆ. ರಾಜ್ಯ ಶಾಸ್ತ್ರ, ಗಣಿತ, ವಿಜ್ಞಾನ, ತತ್ವಶಾಸ್ತ್ರದ ಆಧಾರದಲ್ಲಿ ಪರೀಕ್ಷೆ ಎದುರಿಸಿದ್ದೆ ಎಂದು ಮಧು ಹೇಳುತ್ತಾರೆ.
ಯಾವ ಕೋಚಿಂಗ್ ಇಲ್ಲ: ಮಧು ಯಾವ ಕೋಚಿಂಗ್ ಕ್ಲಾಸ್ ಕಡೆಯೂ ಕಾಲು ಹಾಕಿಲ್ಲ. ತಮ್ಮ ವೈಯಕ್ತಿಕ ತೀರ್ಮಾನಗಳ ಅಡಿಯಲ್ಲಿ ತಮ್ಮದೇ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ ಯಶ ಕಂಡಿದ್ದಾರೆ. ಯು ಟ್ಯೂಬ್ ಸೇರಿದಂತೆ ಅನೇಕ ಆನ್ ಲೈನ್ ಸಹಾಯ ಪಡೆದುಕೊಂಡಿದ್ದೇನೆ ಎನ್ನುತ್ತಾರೆ.
ಗುಡ್ ಲಕ್: ಐಎಎಸ್ ಮೇನ್ಸ್ ಸಹ ಕ್ಲೀಯರ್ ಮಾಡಿರುವ ಸಾಧಕ ಇದೀಗ ಸಂದರ್ಶನವೊಂದನ್ನು ಪೂರ್ಣ ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ. ನಮ್ಮ ರಾಜ್ಯದ ವ್ಯಕ್ತಿ, ನಮ್ಮ ಬಿಎಂಟಿಸಿಯಲ್ಲಿ ಕೆಲಸ ಮಾಡುವ ವ್ಯಕ್ತಿ ತಾನು ಅಂದುಕೊಂಡಿದ್ದನ್ನು ಸಾಧಿಸಲಿ.. ಗುಡ್ ಲಕ್ ಮಧು..