ನಟಿ ಸಂಜನಾ ಗಲ್ರಾನಿ ಮಾಡಿರುವ ಮೀ ಟೂ ಆರೋಪಕ್ಕೆ ಇದೀಗ ಡೆಡ್ ಲೈನ್ ನೀಡಲಾಗಿದೆ. ನವೆಂಬರ್ 8ರವರೆಗೆ ಸ್ಪಷ್ಟನೆ ನೀಡಲು ಸಮಯಾವಕಾಶ ನೀಡಲಾಗಿದೆ. 

ಬೆಂಗಳೂರು :  ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ನಟಿ ಸಂಜನಾ ಗಲ್ರಾನಿ ಈ ಬಗ್ಗೆ ವಿವರಣೆ ನೀಡುವುದಕ್ಕೆ ನವೆಂಬರ್‌ 8 ರವರೆಗೂ ಸಮಯ ನೀಡುವಂತೆ ನಿರ್ದೇಶಕರ ಸಂಘದ ಅಧ್ಯಕ್ಷ ವಿ.ನಾಗೇಂದ್ರಪ್ರಸಾದ್‌ ಅವರಿಗೆ ಮನವಿ ಮಾಡಿದ್ದಾರೆ. ಆದರೆ, ನ.2ಕ್ಕೇ ಬಂದು ವಿವರಣೆ ನೀಡುವಂತೆ ನಾಗೇಂದ್ರ ಪ್ರಸಾದ್‌ ಸೂಚಿಸಿದ್ದಾರೆ.

Add Asianetnews Kannada as a Preferred SourcegooglePreferred

ಸದ್ಯ ವಿದೇಶದಲ್ಲಿರುವ ಸಂಜನಾ ನಿರ್ದೇಶಕರ ಸಂಘವನ್ನು ಭೇಟಿ ಮಾಡಲು ಮುಂದಾಗಿದ್ದು, ನಾಗೇಂದ್ರ ಪ್ರಸಾದ್‌ ಅವರ ಜೊತೆ ಈ ಕುರಿತು ಫೋನ್‌ ಮೂಲಕ ಮಾತನಾಡಿ ಸಮಯ ಕೇಳಿದ್ದಾರೆ. ‘ನಾನು ವಿದೇಶದಲ್ಲಿದ್ದೇನೆ. ರವಿ ಶ್ರೀವತ್ಸ ಮೇಲೆ ಮಾಡಿರುವ ಆರೋಪದ ಬಗ್ಗೆ ಖುದ್ದಾಗಿ ಭೇಟಿ ಮಾಡಿ ತಿಳಿಸುತ್ತೇನೆ. ಇದಕ್ಕೆ ನ.8ರವರೆಗೂ ಸಮಯ ನೀಡಿ’ ಎಂದು ಕೇಳಿದ್ದಾರೆ.

ನಿರ್ದೇಶಕರ ಸಂಘಕ್ಕೆ ಬರುವುದಕ್ಕೆ ನಟಿ ಸಂಜನಾ ನ.8ರ ವರೆಗೂ ಸಮಯ ಕೇಳಿದ್ದಾರೆ. ಆದರೆ, ಅವರು ವಿದೇಶದಿಂದ ನ.1ರಂದೇ ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ ನ.2ಕ್ಕೇ ನಿರ್ದೇಶಕರ ಸಂಘಕ್ಕೆ ಬಂದು ಆರೋಪಕ್ಕೆ ಸ್ಪಷ್ಟೀಕರಣ ಕೊಡುವಂತೆ ಸೂಚಿಸಲಾಗಿದೆ. ಒಂದು ವೇಳೆ ನ.2ರಂದು ನಟಿ ಸಂಜನಾ ನಿರ್ದೇಶಕರ ಸಂಘಕ್ಕೆ ಬಾರದಿದ್ದರೆ ಸಂಘದ ಸಭೆಯಲ್ಲಿ ಈ ಕುರಿತು ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.

- ನಾಗೇಂದ್ರ ಪ್ರಸಾದ್‌, ಅಧ್ಯಕ್ಷರು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ

ರವಿ ಶ್ರೀವತ್ಸ ನಿರ್ದೇಶನದ ‘ಗಂಡ ಹೆಂಡತಿ’ ಚಿತ್ರದಲ್ಲಿ ನಾಯಕಿಯಾಗಿ ಸಂಜನಾ ನಟಿಸಿದ್ದರು. ಇತ್ತೀಚೆಗೆ ರವಿ ಶ್ರೀವತ್ಸ ಮೇಲೆ ಅವರು ಮೀ ಟೂ ಅರೋಪ ಮಾಡಿದ್ದರು. ಇದಕ್ಕೆ ರವಿ ಶ್ರೀವತ್ಸ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಸದರಿ ಪ್ರಕರಣ ನಿರ್ದೇಶಕರ ಸಂಘದ ಮೆಟ್ಟಿಲೇರಿದ ಮೇಲೆ ಸಂಜನಾ ಆರೋಪದಲ್ಲಿ ಯಾವುದೇ ರೀತಿಯ ಸತ್ಯ ಇಲ್ಲ. ಮೀ ಟೂ ಹೆರಿನಲ್ಲಿ ಆಕೆ ಮಾಡುತ್ತಿರುವ ಆರೋಪಗಳು ದುರುದ್ದೇಶದಿಂದ ಕೂಡಿದೆ ಎಂದು ತೀರ್ಮನಿಸಿದ ನಿರ್ದೇಶಕರ ಸಂಘ ಸಂಜನಾ ಅವರಿಗೆ ನಿರ್ದೇಶಕ ರವಿ ಶ್ರೀವತ್ಸ ಅವರಲ್ಲಿ ಕ್ಷಮೆ ಕೇಳುವಂತೆ ಸೂಚಿಸಿತ್ತು. ಕ್ಷಮೆ ಕೇಳಲು ಅ.26ರ ಗಡುವು ನೀಡಲಾಗಿತ್ತು.

ನಿರ್ದೇಶಕರ ಸಂಘದ ಈ ನಿರ್ಧಾರದಿಂದ ಎಚ್ಚೆತ್ತುಕೊಂಡ ನಟಿ ಸಂಜನಾ ತಮ್ಮ ಅರೋಪದ ಕುರಿತು ವಿವರಣೆ ನೀಡುವುದಕ್ಕೆ ಸಮಯ ಕೇಳಿದ್ದಾರೆ ಎಂದು ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್‌ ತಿಳಿಸಿದ್ದಾರೆ.