ನ.8ಕ್ಕೆ 10 ತಿಂಗಳು ಮುಂಚೆ ಭಾರತೀಯ ಜನತಾ ಪಕ್ಷದ ಬ್ಯಾಂಕ್ ಖಾತೆಗಳಿಗೆ ಜಮೆಯಾದ ಹಣದ ವಿವರವನ್ನು ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಯಾವತಿ ಸವಾಲೆಸೆದಿದ್ದಾರೆ.

ಲಕ್ನೋ(ಡಿ. 27): ಉತ್ತರಪ್ರದೇಶದಲ್ಲಿ ಪ್ರಬಲವಾಗಿರುವ ಬಹುಜನ ಸಮಾಜ ಪಕ್ಷವನ್ನು ಹಣಿಯಲು ಕೇಂದ್ರ ಸರಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಿಸಿಕೊಳ್ಳುತ್ತಿದೆ ಎಂದು ಮಾಜಿ ಉ.ಪ್ರ. ಸಿಎಂ ಮಾಯಾವತಿ ಆರೋಪಿಸಿದ್ದಾರೆ. ನೋಟ್ ಬ್ಯಾನ್ ಆದ ನ. 8ರ ಬಳಿಕ ಬಿಎಸ್’ಪಿ ಪಕ್ಷದ ಬ್ಯಾಂಕ್ ಖಾತೆಯಲ್ಲಿ 104 ಕೋಟಿ ರೂ ಜಮೆಯಾಗಿರುವುದನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಮಾಯಾವತಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

“ನಮ್ಮ ಪಕ್ಷದ ಖಾತೆಗೆ ಜಮೆಯಾಗಿರುವ 104 ಕೋಟಿಯ ಪ್ರತಿಯೊಂದು ಪೈಸೆಗೂ ಲೆಕ್ಕವಿಟ್ಟಿದ್ದೇವೆ. ಆ ಹಣವನ್ನು ಪಕ್ಷದ ಕಾರ್ಯಕರ್ತರು ಕಷ್ಟಪಟ್ಟು ಒದಗಿಸಿದ್ದಾರೆ. ಅಕ್ರಮವಾಗಿ ಹಣದ ಸಂಗ್ರಹವಾಗಿಲ್ಲ” ಎಂದು ಬಿಎಸ್’ಪಿ ಮುಖ್ಯಸ್ಥೆ ಮಾಯಾವತಿ ಸ್ಪಷ್ಟಪಡಿಸಿದ್ದಾರೆ.

ಇನ್ನೂ ಮುಂದುವರಿದ ಮಾಯಾವತಿ, ನ.8ಕ್ಕೆ 10 ತಿಂಗಳು ಮುಂಚೆ ಭಾರತೀಯ ಜನತಾ ಪಕ್ಷದ ಬ್ಯಾಂಕ್ ಖಾತೆಗಳಿಗೆ ಜಮೆಯಾದ ಹಣದ ವಿವರವನ್ನು ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲೆಸೆದಿದ್ದಾರೆ.

“ಪ್ರಧಾನಿಯವರಿಗೆ ಕಾಳಜಿ ಮತ್ತು ಪ್ರಾಮಾಣಿಕತೆಯೇನಾದರೂ ಇದ್ದರೆ, ಬಿಜೆಪಿಯ ಪ್ರಮುಖ ವೆಚ್ಚ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್’ಗಳನ್ನು ಒದಗಿಸಲಿ. ನಾವೆಲ್ಲರೂ ಬಹಿರಂಗವಾಗಿ ಬರೋಣ. ಯಾರಾರು ಹೇಗೇಗೆ ಎಂಬುದು ಪ್ರತಿಯೊಬ್ಬರಿಗೂ ತಿಳಿಯಲಿ” ಎಂದು ಮಾಯಾವತಿ ಹೇಳಿದ್ದಾರೆ.