Asianet Suvarna News Asianet Suvarna News

ಈ ಇಬ್ಬರು ನಾಯಕರಿಗೆ ಕಾಂಗ್ರೆಸ್ ತೊರೆಯಲು ಸಲಹೆ

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಭಾಗಿಯಾಗಿದ ಕಾರಣಕ್ಕೆ ಸಚಿವ ಸ್ಥಾನಕ್ಕೆ ಪರಿಗಣಿಸದ ಹಿನ್ನೆಲೆಯಲ್ಲಿ ಎಂ.ಬಿ.ಪಾಟೀಲ್ ಅವರು ತಮ್ಮ ಸಮಾನ ಮನಸ್ಕರೊಡನೆ ಕಾಂಗ್ರೆಸ್‌ನಿಂದ ಹೊರ ಬರಬೇಕು ಎಂದು  ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಸಲಹೆ ನೀಡಿದ್ದಾರೆ. 

Mathe Mahadevi tells M B Patil, Jarkiholi to quit Congress

ಬೆಂಗಳೂರು :  ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಭಾಗಿಯಾಗಿದ ಕಾರಣಕ್ಕೆ ಸಚಿವ ಸ್ಥಾನಕ್ಕೆ ಪರಿಗಣಿಸದ ಹಿನ್ನೆಲೆಯಲ್ಲಿ ಎಂ.ಬಿ.ಪಾಟೀಲ್ ಅವರು ತಮ್ಮ ಸಮಾನ ಮನಸ್ಕರೊಡನೆ ಕಾಂಗ್ರೆಸ್‌ನಿಂದ ಹೊರ ಬರಬೇಕು ಎಂದು  ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಸಲಹೆ ನೀಡಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕ್ರಿಯಾಶೀಲವಾಗಿರುವ ಎಂ.ಬಿ.ಪಾಟೀಲರು ಜಲಸಂಪನ್ಮೂಲ ಖಾತೆಯ ಸಚಿವರಾಗಿ ಉತ್ತಮ ಆಡಳಿತ ನೀಡಿದ್ದಾರೆ. 

ಇವರೊಂದಿಗೆ ಸತೀಶ್ ಜಾರಕಿಹೊಳಿ ಅವರು ಸಹ ಉತ್ತಮ ಜನಪ್ರತಿನಿಧಿ ಎನಿಸಿಕೊಂಡಿದ್ದಾರೆ. ಆದರೆ, ಮೊದಲ ಹಂತದಲ್ಲಿ ಇವರಿಬ್ಬರಿಗೂ ಸಚಿವ ಸ್ಥಾನ ನೀಡದೆ ಅವಮಾನ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಂ.ಬಿ.ಪಾಟೀಲ್ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಸಕ್ರಿಯರಾಗಿದ್ದ ಕಾರಣ ಅವರಿಗೆ ಸಚಿವ ಸ್ಥಾನ ನಿರಾಕರಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. 

ಇವರಿಬ್ಬರಿಗೆ ಸಚಿವ ಸ್ಥಾನ ಸಿಗದೇ ಇರಲು ಸ್ಥಳೀಯ ನಾಯಕರು ಕಾರಣವೋ ಅಥವಾ ಹೈಕಮಾಂಡ್ ಕೈವಾಡ ಕಾರಣವೋ ತಿಳಿಯುತ್ತಿಲ್ಲ. ಇದರಿಂದ ಸಮುದಾಯಕ್ಕೂ ಅವಮಾನವಾಗಿದೆ. ಹಾಗಾಗಿ ಇಬ್ಬರು ಮುಖಂಡರು ಕಾಂಗ್ರೆಸ್‌ನಿಂದ ಹೊರಬರುವುದು ಒಳಿತು ಎಂದರು. 

ಜಾಮದಾರ್ ಚಿಂತನೆ ಸರಿಯಲ್ಲ: ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಎಸ್. ಎಂ.ಜಾಮದಾರ್ ಅವರು, ಅಖಿಲ ಭಾರತ ವೀರಶೈವ ಮಹಾಸಭೆ ಯನ್ನು ಲಿಂಗಾಯತ ಮಹಾಸಭೆ ಎಂದು ಬದಲಾಯಿಸಲು ಸೂಚಿಸಿದ್ದಾರೆ. ಇದು ಸಾಧ್ಯವಾಗದಿದ್ದರೆ ಲಿಂಗಾಯತ- ವೀರಶೈವ ಮಹಾಸಭೆ ಎಂದು ಬದಲಾಯಿಸ ಬೇಕು ಎಂದು ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದ್ದಾರೆ. ಇದು ಸರಿಯಲ್ಲ. ಲಿಂಗಾಯತ ಮಹಾಸಭಾದ ಸದಸ್ಯರು ಬಸವ ತತ್ವಕ್ಕೆ ಬದ್ಧರಾಗಬೇಕೇ ವಿನಾ ರಾಜಕಾರಣಕ್ಕಾಗಿ ಹೊಂದಾಣಿಕೆ ತಂತ್ರದ ಮೊರೆ ಹೋಗಬಾರದು ಎಂದರು.

ಅಲ್ಲದೆ, ಜಾಗತಿಕ ಲಿಂಗಾಯತ ಮಹಾಸಭೆ ಸ್ಥಾಪಿಸಿದ ಮೇಲೆ ಸಮುದಾಯವು ವೀರಶೈವ ಮಹಾಸಭೆಯ ಸಾಂಗತ್ಯ ಬಯಸುವ ಅಗತ್ಯವಿಲ್ಲ ಎಂದರು. 

Follow Us:
Download App:
  • android
  • ios