ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಮಹತ್ತರ ರಾಜತಾಂತ್ರಿಕ ಜಯ; ಜಾಗತಿಕ ಉಗ್ರರ ಪಟ್ಟಿಗೆ ಮಸೂದ್ ಅಜರ್

ಬೆಂಗಳೂರು: ಪುಲ್ವಾಮಾ ಸೇರಿದಂತೆ ದೇಶದಲ್ಲಿ ಹಲವು ಭಯೋತ್ಪಾದಕ ದಾಳಿಗಳಿಗೆ ಕಾರಣನಾಗಿರುವ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯು ಬುಧವಾರ ಜಾಗತಿಕ ಉಗ್ರಗಾಮಿಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. ಆ ಮೂಲಕ ಭಯೋತ್ಪಾದನಾ ವಿರೋಧಿ ಹೋರಾಟದಲ್ಲಿ ಭಾರತಕ್ಕೆ ಮಹತ್ತರ ಜಯ ಸಿಕ್ಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ವಿಶ್ವಸಂಸ್ಥೆಯ ದಿಗ್ಬಂಧನ ಸಮಿತಿಯ ಸಭೆ ಬುಧವಾರ ನಡೆದಿದ್ದು, ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಪ್ರಯತ್ನಗಳಿಗೆ ಈವರೆಗೆ 4 ಬಾರಿ ತಡೆಯೊಡ್ಡಿರುವ ಚೀನಾ, ಈ ಬಾರಿ ತನ್ನ ನಿಲುವು ಸಡಿಲಿಸಿದೆ. ಅಜರ್‌ ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆಯಾದರೆ ಆತನ ಆರ್ಥಿಕ ವ್ಯವಹಾರ, ಓಡಾಟಗಳಿಗೂ ಈ ನಿರ್ಧಾರದಿಂದ ಹೊಡೆತ ಬೀಳಲಿದೆ.

ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಬೇಕು ಎಂದು ಭಾರತ ಒತ್ತಾಯಿಸುತ್ತಲೇ ಬಂದಿತ್ತು. ಅದಕ್ಕೆ ಪಾಕಿಸ್ತಾನದ ಆಪ್ತ ಮಿತ್ರ ಚೀನಾ ವಿಶ್ವಸಂಸ್ಥೆಯಲ್ಲಿ ತನಗಿರುವ ಅಧಿಕಾರ ಬಳಸಿ ತಡೆಯೊಡ್ಡುತ್ತಲೇ ಬಂದಿತ್ತು. 40 ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಬೇಕು ಎಂಬ ನಿರ್ಣಯವನ್ನು ವಿಶ್ವಸಂಸ್ಥೆಯಲ್ಲಿ ಅಮೆರಿಕ ಹಾಗೂ ಬ್ರಿಟನ್‌ ಬೆಂಬಲದೊಂದಿಗೆ ಫ್ರಾನ್ಸ್‌ ಮಂಡಿಸಿತ್ತು.