ಮೀಸಲಾತಿ ಬೇಡಿಕೆಗೆ ಮರಾಠಿಗರ ಬೃಹತ್ ಪ್ರತಿಭಟನೆ
ಕೇಸರಿ ಧ್ವಜ ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಪ್ರತಿಭಟನಾಕಾರರಲ್ಲಿ ಡಬ್ಬವಾಲಾ ಮಂದಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಮುಂಬೈ(ಆ.09): ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಸೇರಿದಂತೆ ಕೆಲ ಪ್ರಮುಖ ಬೇಡಿಕೆಗೆ ಆಗ್ರಹಿಸಿ ಇಂದು ಮಹಾರಾಷ್ಟ್ರದಲ್ಲಿ ಲಕ್ಷಾಂತರ ಮರಾಠಿಗರು ಮೌನ ಪ್ರತಿಭಟನೆ ನಡೆಸಿದರು.
ಪೊಲೀಸರ ಬಿಗಿ ಭದ್ರತೆಯ ನಡುವೆ ಬೈಕುಲ್ಲಾದ ಜೀಜಾಮಾತಾ ಉದ್ಯಾನದಿಂದ ಆರಂಭವಾದ ಮೆರವಣಿಗೆ ಬಳಿಕ ಆಜಾದ್ ಮೈದಾನ ತಲುಪಿತು. ಕೇಸರಿ ಧ್ವಜ ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಪ್ರತಿಭಟನಾಕಾರರಲ್ಲಿ ಡಬ್ಬವಾಲಾ ಮಂದಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮಹಾರಾಷ್ಟ್ರ ಇತಿಹಾಸದಲ್ಲಿಯೇ ಇದು ಅತ್ಯಂತ ಬೃಹತ್ ಮೋರ್ಚಾ ಆಗಿದೆ. ಇನ್ನು ಪ್ರತಿಭಟನೆಯಲ್ಲಿ ಭಾಗಿಯಾಗಲು ಆಗಮಿಸಿದ್ದ ಮುಂಬೈನ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದ ಪ್ರಸಂಗವೂ ನಡೆಯಿತು. ಮರಾಠ ಸಮುದಾಯದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.