ಬಿಜೆಪಿಯತ್ತ ಮುಖ ಮಾಡಿದ ಕಾಂಗ್ರೆಸ್ ಮುಖಂಡರು
ವಿಧಾನ ಪರಿಷತ್ತಿನ ಮಾಜಿ ಸದಸ್ಯ ದಯಾನಂದ ರೆಡ್ಡಿ, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ ಸೇರಿದಂತೆ ಹಲವರು ಬುಧವಾರ ಬಿಜೆಪಿಗೆ ಸೇರ್ಪಡೆಯಾದರು. ಅಲ್ಲದೆ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಎನ್. ಎಸ್.ರೆಡ್ಡಿ, ಸಂಖ್ಯಾ ಶಾಸ್ತ್ರಜ್ಞ ಜಯ ಶ್ರೀನಿವಾಸನ್, ಚಿತ್ರ ನಿರ್ಮಾಪಕ ಉಮೇಶ್ ಬಣಕಾರ್, ಕಾಂಗ್ರೆಸ್ಸಿನ ಮಲ್ಲೇಶ್ಗೌಡ, ದಯಾನಂದ ರೆಡ್ಡಿ ಬೆಂಬಲಿಗರಾದ ಆನೇಕಲ್ ಭಾಗದ ತಿಪ್ಪಾರೆಡ್ಡಿ, ಹುಸ್ಕೂರು ಪಾಪಣ್ಣ, ಮಲ್ಲೇಶ ಗೌಡ, ಮೊದಲಾದವರು ಬಿಜೆಪಿ ಸೇರಿದರು.
ಬೆಂಗಳೂರು : ವಿಧಾನ ಪರಿಷತ್ತಿನ ಮಾಜಿ ಸದಸ್ಯ ದಯಾನಂದ ರೆಡ್ಡಿ, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ ಸೇರಿದಂತೆ ಹಲವರು ಬುಧವಾರ ಬಿಜೆಪಿಗೆ ಸೇರ್ಪಡೆಯಾದರು. ಅಲ್ಲದೆ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಎನ್. ಎಸ್.ರೆಡ್ಡಿ, ಸಂಖ್ಯಾ ಶಾಸ್ತ್ರಜ್ಞ ಜಯ ಶ್ರೀನಿವಾಸನ್, ಚಿತ್ರ ನಿರ್ಮಾಪಕ ಉಮೇಶ್ ಬಣಕಾರ್, ಕಾಂಗ್ರೆಸ್ಸಿನ ಮಲ್ಲೇಶ್ಗೌಡ, ದಯಾನಂದ ರೆಡ್ಡಿ ಬೆಂಬಲಿಗರಾದ ಆನೇಕಲ್ ಭಾಗದ ತಿಪ್ಪಾರೆಡ್ಡಿ, ಹುಸ್ಕೂರು ಪಾಪಣ್ಣ, ಮಲ್ಲೇಶ ಗೌಡ, ಮೊದಲಾದವರು ಬಿಜೆಪಿ ಸೇರಿದರು.
ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರರಾವ್ ಅವರು ಈ ಮುಖಂಡರಿಗೆ ಪಕ್ಷದ ಬಾವುಟ ನೀಡುವ ಮೂಲಕ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಯಡಿಯೂರಪ್ಪ, ಕಾಂಗ್ರೆಸ್ ನಿಜವಾದ ಮುಖ ಈಗ ದೇಶದ ಜನರಿಗೆ ಗೊತ್ತಾಗುತ್ತಿದೆ. ಹೀಗಾಗಿಯೇ ಎಲ್ಲ ರಾಜ್ಯಗಳಿಂದಲೂ ಆ ಪಕ್ಷ ಹೊರಗೆ ಹೋಗುತ್ತಿದೆ.
ಕರ್ನಾಟಕದಲ್ಲಿ ಕೂಡ ಜನರು ಕಾಂಗ್ರೆಸ್ ಮುಕ್ತ ಮಾಡುವುದು ನಿಶ್ಚಿತ. ಹಳೆ ಮೈಸೂರು ಭಾಗದಲ್ಲಿ ಕೂಡ ಬಿಜೆಪಿ ಸೇರಲು ಅನೇಕರು ಮುಂದೆ ಬರುತ್ತಿದ್ದಾರೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಒಂದು ಕಡೆ ದಿವಾಳಿ ಹಂತ ತಲುಪಿದೆ. ವಿವಿಧ ಯೋಜನೆಗಳ ಜಾರಿಗೆ ಅಗತ್ಯ ಹಣ ಇಲ್ಲ. ಇಂಥ ವೇಳೆ ವೋಟ್ ಬ್ಯಾಂಕ್ ಉದ್ದೇಶದಿಂದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಅರೇಬಿಕ್ ಕಾಲೇಜಿಗೆ 20 ಕೋಟಿ ರು. ಅನುದಾನ ಕೊಡಿಸುವಲ್ಲಿ ಸಫಲರಾಗುತ್ತಾರೆ.
ಸರ್ಕಾರದ ಉಳಿದಿರುವ ಎರಡು ತಿಂಗಳ ಅವಧಿಯಲ್ಲಿ ಏನೇನು ಅನಾಹುತ ಕಾದಿದೆಯೋ ಎಂದು ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ಎಲ್ಲದರಲ್ಲೂ ನಂಬರ್ ಒನ್ ರಾಜ್ಯ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರಲ್ಲೋ, ಅತ್ಯಾಚಾರ ಪ್ರಕರಣಗಳಲ್ಲೋ ಅಥವಾ ಲೂಟಿ ಹೊಡೆಯುವುದರಲ್ಲೋ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಯಡಿಯೂರಪ್ಪ ಲೇವಡಿ ಮಾಡಿದರು.